ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಸೊಪ್ಪಿನಕೇರಿ ಓಣಿಯ ರೈತ ಸಮುದಾಯ ಈ ವರ್ಷವೂ ಮಳೆಗಾಗಿ ಪ್ರಾರ್ಥಿಸಿ ಶ್ರೀ ಕೊಲ್ಲಾರೆಮ್ಮ ದೇವಿಗೆ ವಿಶೇಷ ಪೂಜೆ, ಎತ್ತಿನ ಮೆರವಣಿಗೆ, ಮಹಿಳೆಯರ ಪೂರ್ಣಕುಂಭ, ಪ್ರಸಾದ ಸೇವೆ ಮಾಡುವ ಮೂಲಕ ಮಳೆಗಾಗಿ ಪರವು ಸಂಪ್ರದಾಯ ಆಚರಿಸಿದರು.
ಈ ವಿಶೇಷ ಪರವು ಸಂಪ್ರದಾಯ ಆಚರಣೆಗಾಗಿ ಓಣಿಯ ಹಿರಿಯರು, ಯುವಕರು ಜಂತ್ಲಿ ಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ರಾತ್ರೋರಾತ್ರಿ ಗೋದಿ ಹುಗ್ಗಿ, ಜೋಳದ ಕಿಚಡಿ, ಅನ್ನ-ಸಾರು ಪ್ರಸಾದ ಸಿದ್ಧಪಡಿಸುತ್ತಾರೆ. ಬೆಳಿಗ್ಗೆ ಅಂಲಕೃತ ಎತ್ತಿನ ಬಂಡಿ, ಟ್ರ್ಯಾಕ್ಟರ್ಗಳಲ್ಲಿ ಸಿದ್ಧಪಡಿಸಿ ಪ್ರಸಾದವನ್ನಿರಿಸಿ ಡೊಳ್ಳು, ಭಜನೆ, ಮಹಿಳೆಯರ ಪೂರ್ಣಕುಂಭ, ಎತ್ತುಗಳ ಮೆರವಣಿಗೆ ಮೂಲಕ ಭಜನೆ ಅಡರಕಟ್ಟಿ ಹತ್ತಿರದ ಕೊಲ್ಲಾರೆಮ್ಮನ ಪೌಳಿಗೆ ತೆರಳಿ ಅಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಈ ಸಂದರ್ಭದಲ್ಲಿ ದೇವಿ ಮಳೆಯ ಭವಿಷ್ಯ ಉದ್ಘರಿಸುತ್ತಾಳೆ. ನಂತರ ಲಕ್ಷ್ಮೇಶ್ವರ, ಮಂಜಲಾಪುರ, ಅಡರಕಟ್ಟಿ ಸುತ್ತಮುತ್ತಲಿನ ಭಾಗದ ರೈತ ಕುಟುಂಬಗಳಷ್ಟೇ ಅಲ್ಲದೆ ಈ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ಜನರನ್ನು ಕರೆದು ಪ್ರಸಾದ ಉಣಬಡಿಸಿದರು. ಸಂಜೆ ಸೂರಣಗಿಯ ಡೊಳ್ಳು ಮೇಳದೊಂದಿಗೆ ಪಟಾಕಿ ಸಿಡಿಸಿ ಪಟ್ಟಣದ ಪ್ರಮುಖ ಮಾರ್ಗದಲ್ಲಿ ವಿಜೃಂಭಣೆಯಿಂದ ಎತ್ತುಗಳ ಮೆರವಣಿಗೆ ಜರುಗಿತು. ಓಣಿಯ ಹಿರಿಯರು, ಮಹಿಳೆಯರು ಸೇರಿ ರೈತ ಸಮುದಾಯದವರು ಪಾಲ್ಗೊಂಡಿದ್ದರು.



