ವಿಜಯಸಾಕ್ಷಿ ಸುದ್ದಿ, ಚಿಂಚೋಳಿ : ಜೀವನದ ಉನ್ನತಿಗೆ ಧರ್ಮವೇ ದಿಕ್ಸೂಚಿ. ಧರ್ಮದ ಪಾಲನೆಯಿಂದ ಜೀವನದಲ್ಲಿ ಸುಖ-ಶಾಂತಿ ಪ್ರಾಪ್ತವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ನಗರದ ಹಾರಕೂಡ ಶ್ರೀ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಉದ್ಘಾಟನಾ ಸಮಾರಂಭ ನೆರವೇರಿಸಿ, ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮದ ಹಲವಾರು ಆಚರಣೆಗಳು ಬೇರೆ ಬೇರೆ ಆದರೂ ಆ ಎಲ್ಲ ಧರ್ಮಗಳ ಗುರಿ ಮಾನವ ಕಲ್ಯಾಣವೇ ಆಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ವಿಶ್ವ ಬಂಧುತ್ವದ ಅದ್ಭುತ ಸಂದೇಶವನ್ನು ನೀಡಿ ಸಾಮರಸ್ಯ ಬದುಕಿಗೆ ಬೆಳಕು ತೋರಿದ್ದಾರೆ. ಜಾತಿ, ಮತ, ಪಂಥಗಳ ಗಡಿ ಮೀರಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿದ ಮೊದಲ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಧಾರ್ಮಿಕ ಮೌಲ್ಯಗಳನ್ನು ಪುನರುತ್ಥಾನಗೊಳಿಸಿ ಸೌಹಾರ್ದ ಬದುಕಿಗೆ ನಾಂದಿ ಹಾಡಿದ್ದಾರೆ. ಸಾಮಾಜಿಕ ಸತ್ಕಾಂತಿ ಗೈದ ಪರಮಾಚಾರ್ಯರು. ಮಾನವ ಧರ್ಮದ ಮಹತ್ವವನ್ನು ಬೋಧಿಸಿದ್ದಾರೆ. ಅವರ ಆದರ್ಶ ವಿಚಾರ ಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸುಖ-ಶಾಂತಿಯ ಬದುಕಿಗೆ ಕಾರಣರಾಗಬೇಕು ಎಂದರು.
ನಿಡಗುಂದಾ ಕರುಣೇಶ್ವರ ಶಿವಾಚಾರ್ಯರು ಚಂದನಕೇರಾ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿ ಮಾರ್ಗದರ್ಶನ ನೀಡಿದರು. ಕೊಡ್ಲಿ ಬಸವಲಿಂಗ ಶ್ರೀಗಳು, ಹೊಸಳ್ಳಿ ಸಿದ್ಧಲಿಂಗ ಶ್ರೀಗಳು, ಭರತನೂರು ಚಿಕ್ಕಗುರುನಂಜೇಶ್ವರ ಶ್ರೀಗಳು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು.
ಗೌತಮ ಪಾಟೀಲ, ಶಶಿಧರ ಯಾಲಾಲ, ಶಂಕರಗೌಡ ಅಲ್ಲಾಪುರ, ಸಂತೋಷ ಗಡಂತಿ, ಗುಂಡಯ್ಯಸ್ವಾಮಿ, ಜಗನ್ನಾಥ ಇದಲಾಯಿ, ಕುಮಾರಿ ಉಮಾ ಪಾಟೀಲ, ಜಗನ್ನಾಥ ಶೀರಿಕಾರ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳನ್ನು ಸಾರೋಟ ಉತ್ಸವದ ಮೂಲಕ ಬರಮಾಡಿಕೊಳ್ಳಲಾಯಿತು.
Advertisement