ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ಸೃಜನಶೀಲ ವಿಚಾರಧಾರೆಯುಳ್ಳವರಾಗಿದ್ದ ಶ್ರೀ ವಿಶ್ವಕರ್ಮರು ಕೈಗೊಂಡ ಕಾರ್ಯಗಳು ಸ್ಮರಣೀಯವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮ ಸಮಾಜಕ್ಕೆ ದೈವಶಕ್ತಿ ಇರುವ ಕಾರಣ ಸಕಲ ಕಲೆಗಳನ್ನು ಕರಗತ ಮಾಡಿಕೊಂಡು ಸಮಾಜದಲ್ಲಿ ಸ್ಮರಣೀಯ ಸೇವೆಯಲ್ಲಿ ತೊಡಗಿದ್ದಾರೆ. ವಿಶ್ವಕರ್ಮ ಸಮಾಜವು ನಿರ್ಮಿಸಿದ ಶಿಲ್ಪಕಲೆಯು ಶ್ರೀಮಂತಿಕೆಯಿಂದ ಕೂಡಿದೆ ಎಂದರು.
ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ಕರಕುಶಲ ವಸ್ತುಗಳು, ಕಲೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಕೌಶಲ್ಯ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಕುಲಕಸುಬುದಾರರಿಗೆ ತರಬೇತಿ ಕಾರ್ಯಕ್ರಮ, ತರಬೇತಿ ಭತ್ಯೆ, ಸಾಲ ಮತ್ತು ಸಹಾಯಧನ ಹೀಗೆ ಹಲವಾರು ಸೌಲಭ್ಯಗಳಿದ್ದು, ಇವುಗಳ ಸದುಪಯೋಗ ಪಡೆದು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ವೀರಶೇಖರ ಬಿ.ಪತ್ತಾರ ಉಪನ್ಯಾಸ ನೀಡಿ, ಶ್ರೀ ವಿಶ್ವಕರ್ಮರು ನಿರಾಕಾರ, ನಿರ್ಗುಣ, ಅನಂತ, ಚೈತನ್ಯರೂಪಿಯಾಗಿದ್ದರು. ದೇವರ ದೇವರೇ ಆಗಿದ್ದರು ಎಂದು ತಿಳಿಸಿದರು.
ಜಿಲ್ಲಾ ವಿಶ್ವಕರ್ಮ ಸಮಾಜದ ಗೌರವಾಧ್ಯಕ್ಷ ಈಶಪ್ಪ ಬಡಿಗೇರ್ ಪ್ರಾಸ್ತಾವಿಕ ಮಾತನಾಡಿ, ವಿಶ್ವಕರ್ಮ ಸಮಾಜದ ಉದ್ಧಾರಕ್ಕೆ ಶಿಕ್ಷಣದ ಅವಶ್ಯಕತೆ ಇದೆ ಎಂದು ತಿಳಿಸಿದರು. ತ್ರಿಮೂರ್ತಿಗಳು ಹುಟ್ಟದೇ ಇರುವಂತಹ ಸಂದರ್ಭದಲ್ಲಿ ಜಗತ್ತನ್ನು ಸೃಷ್ಟಿಸಿ, ಜಗತ್ತಿಗೆ ಕರ್ತೃತ್ವ ಮತ್ತು ಕರ್ತವ್ಯಗಳ ಬಗ್ಗೆ ವಿಶ್ವಕರ್ಮರು ತಿಳಿಸಿಕೊಟ್ಟರು.
ಈ ಮಾತು ಪುರಾಣ, ವೇದಗಳಲ್ಲಿದೆ. ವಿಶ್ವಕರ್ಮರು ಸಕಲ ಚೈತನ್ಯವನ್ನು ಸೃಷ್ಟಿಸಿದರು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಕೊಪ್ಪಳ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ದೇವಪ್ಪ ಬಡಿಗೇರ, ಉಪಾಧ್ಯಕ್ಷ ಮಹಾದೇವಪ್ಪ ಕಮ್ಮಾರ ಮತ್ತು ರಾಮಣ್ಣ, ಲೇಖಕಿ ಸಾವಿತ್ರಿ ಮುಜಮದಾರ, ವಿಶ್ವಕರ್ಮ ಸಮಾಜದ ಭಾಂದವರು ಉಪಸ್ಥಿತರಿದ್ದರು. ಚೈತ್ರಾ ಪತ್ತಾರ ಹಾಗೂ ಸಂಗಡಿಗರು ನಾಡಗೀತೆ ಹೇಳಿದರು. ಉಮೇಶ ಪತ್ತಾರ ವಂದಿಸಿದರು.
ವಿಶ್ವಕರ್ಮ ಸಮಾಜದ ಜಿಲ್ಲಾ ಅಧ್ಯಕ್ಷ ನಾಗೇಶ ಕುಮಾರ್ ಮಾತನಾಡಿ, ವಿಶ್ವಕರ್ಮ ಸಮಾಜವು ಜಗತ್ತಿಗೆ ಅದ್ಭುತ ಕಲೆ ನೀಡಿದ ಸಮಾಜವಾಗಿದೆ. ಜಿಲ್ಲಾಡಳಿತ ನಮ್ಮ ಕಲೆಗೆ ಸಹಕರಿಸಿ ಬೇಕಾದ ಸೌಲಭ್ಯಗಳನ್ನು ಒದಗಿಸುವಂತಾಗಲಿ. ಅದರಂತೆ ನಮ್ಮತನವನ್ನು ನಾವೆಂದಿಗೂ ಬಿಡದೇ ಕೆಲಸದಲ್ಲಿ ನಿರತರಾಗಬೇಕು. ವಿಶ್ವಕರ್ಮ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿರುವುದು ಸಂತಸ ತಂದಿದೆ ಎಂದರು.