ಬೆಂಗಳೂರು: ಭಾರತಕ್ಕೆ ‘ನ್ಯಾಯ’ದ ಬಗ್ಗೆ ಉಪದೇಶ ನೀಡುವ ಪಕ್ಷಕ್ಕೆ ಒಂದು ಸುರಕ್ಷಿತ ತರಗತಿ ಕೊಠಡಿಯನ್ನೇ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಶಾಲಾ ಮೇಲ್ಛಾವಣಿ ಕುಸಿತ ಪ್ರಕರಣ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಶೋಕ್, ಕರ್ನಾಟಕದ ಈ ‘ಖಟಾಖಟ್ ರೂಫ್’ ಶಾಲೆಯಲ್ಲಿ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮ ನಡೆಸುವ ಬಗ್ಗೆ ಏನು ಹೇಳುತ್ತೀರಿ ಎಂದು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. ನ್ಯಾಯದ ಭಾಷಣ ಮಾಡಿ, ಗ್ಯಾರಂಟಿಗಳನ್ನು ಮಾರಾಟ ಮಾಡಿ, ಖಟಾಖಟ್ ಎಂದು ಕೂಗಿದ ರಾಹುಲ್ ಗಾಂಧಿ ಈಗ ಬಂದು ವಿದ್ಯಾರ್ಥಿಗಳ ಮಾತುಗಳನ್ನು ಕೇಳಬೇಕು ಎಂದು ಆಗ್ರಹಿಸಿದ ಅಶೋಕ್,
ಬಾಗಲಕೋಟೆಯಲ್ಲಿ ಮಕ್ಕಳು ತರಗತಿಯಲ್ಲಿ ಕುಳಿತಿದ್ದಾಗಲೇ ಶಾಲೆಯ ಛಾವಣಿ ಕುಸಿದುಬಿದ್ದಿದೆ ಎಂದು ಆರೋಪಿಸಿದರು. ಇವರೇನೂ ಅಂಕಿ-ಅಂಶಗಳಲ್ಲ, ಪುಟ್ಟ ಮಕ್ಕಳು ಎಂದು ಹೇಳಿದ ಅವರು, ಇದು ಯಾವುದೋ ಮೂರನೇ ಜಗತ್ತಿನ ಮರೆತುಹೋದ ಮೂಲೆಯಲ್ಲ, ಇದು ಕಾಂಗ್ರೆಸ್ ಆಡಳಿತದ ಕರ್ನಾಟಕ ಎಂದು ಟೀಕಿಸಿದರು.
ಭಾರತಕ್ಕೆ ನ್ಯಾಯದ ಬಗ್ಗೆ ಪಾಠ ಮಾಡುವ ಕಾಂಗ್ರೆಸ್ ಪಕ್ಷಕ್ಕೆ ವಿದ್ಯಾರ್ಥಿಗಳಿಗೆ ಸುರಕ್ಷಿತ ತರಗತಿ ಕೊಠಡಿ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದ ಅಶೋಕ್, ಗ್ಯಾರಂಟಿಗಳ ಬಗ್ಗೆ ಮಾತನಾಡುವ ಸರ್ಕಾರಕ್ಕೆ ಮಕ್ಕಳ ತಲೆಯ ಮೇಲಿನ ಶಾಲಾ ಮೇಲ್ಛಾವಣಿಯನ್ನೇ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ಷೇಪಿಸಿದರು. ರಾಹುಲ್ ಗಾಂಧಿ ಅವರು ವೇದಿಕೆ, ಘೋಷಣೆ ಹಾಗೂ ಸಿದ್ಧಪಡಿಸಿದ ಭಾಷಣಗಳನ್ನು ಬದಿಗಿಟ್ಟು ಕರ್ನಾಟಕಕ್ಕೆ ಬಂದು ಈ ಶಾಲೆಯಲ್ಲಿ ನಿಂತು ಮಕ್ಕಳ ಧ್ವನಿಯನ್ನು ಆಲಿಸಬೇಕು ಎಂದು ಆಗ್ರಹಿಸಿದರು.



