ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಸಂಘಟನೆಯ ನೇತೃತ್ವದಲ್ಲಿ ನೀಟ್ ರದ್ದುಪಡಿಸಿ, ಹಾಸ್ಟೆಲ್ ಪ್ರಾರಂಭಿಸಿ, ಬಸ್ ಸಮಸ್ಯೆ ಹಾಗೂ ವಿವಿಧ ಬೇಡಿಕೆ ಬಗೆಹರಿಸಲು ಒತ್ತಾಯಿಸಿ ವಿದ್ಯಾರ್ಥಿಗಳು ಶುಕ್ರವಾರ ಕೆ.ಕೆ. ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಎಸ್ಎಫ್ಐ ಮುಖಂಡ ಗಣೇಶ ರಾಠೋಡ ಮಾತನಾಡಿ, ನೀಟ್ ಪರೀಕ್ಷೆ ರದ್ದುಪಡಿಸಲು ಮತ್ತು ನೀಟ್, ನೆಟ್ ಪರೀಕ್ಷೆಯಲ್ಲಿ ನಡೆದ ಹಗರಣದ ನಿಪಕ್ಷಪಾತ ತನಿಖೆಗೆ ಮುಂದಾಗಬೇಕು. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟಾçದ್ಯಂತ ನಡೆದ ಮುಷ್ಕರದಲ್ಲಿ ರಾಜ್ಯದ ವಿದ್ಯಾರ್ಥಿಗಳು ಮುಷ್ಕರದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಅದರಂತೆ ಎಸ್ಎಫ್ಐ ಗಜೇಂದ್ರಗಡ ತಾಲೂಕು ಸಮಿತಿಯು ಇಂದು ಬೃಹತ್ ಪ್ರತಿಭಟನೆ ಮಾಡಿ ಮನವಿ ಸಲ್ಲಿಸುತ್ತಿದೆ ಎಂದರು.
ನೆಟ್ ಮರು ಪರೀಕ್ಷೆ, ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ರಾಷ್ಟಾçದ್ಯಂತ ಸುದ್ದಿ ಮಾಡಿದೆ. ಜೂನ್ 4ರಂದು ಘೋಷಿಸಲಾದ ನೀಟ್ ಪರೀಕ್ಷೆಯ ಫಲಿತಾಂಶಗಳು ಸರಿಯಾದ ಪಾರದರ್ಶಕತೆ ಇಲ್ಲದೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಂತಹ ದೂರುಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಬಾಧಿತರಾಗಿದ್ದಾರೆ ಎಂದ ಅವರು, `ಒಂದು ರಾಷ್ಟ್ರ, ಒಂದು ಪರೀಕ್ಷೆ’ ಎಂಬ ಘೋಷಣೆಯ ಅಡಿಯಲ್ಲಿ ಇಡೀ ಪರೀಕ್ಷಾ ವ್ಯವಸ್ಥೆಯು ಕುಸಿದಿದೆ ಮತ್ತು ಅನಿರ್ದಿಷ್ಟಾವಧಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ದೂರಿದರು.
ಮುಖಂಡರಾದ ಶರಣು ಎಂ, ಮಹಾಂತೇಶ, ಬಸವರಾಜ, ಅನಿಲ್, ವಿಜಯಕುಮಾರ್, ಬಸು ಪಾಟೀಲ್, ಅಕ್ಷತಾ, ಬಾನು, ಉಮೇಶ, ದ್ಯಾಮಣ್ಣ, ಕಿರಣ ರಾಠೋಡ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಹೋರಾಟದ ಸ್ಥಳಕ್ಕೆ ತಹಸೀಲ್ದಾರರು ಭೇಟಿ ನೀಡಿ ಮನವಿ ಸ್ವೀಕರಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಕಳಿಸಲಾಗುವುದು, ಸ್ಥಳೀಯ ಸಮಸ್ಯೆಗಳ ಕುರಿತು ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಮತ್ತು ಡಿಪೋ ಮ್ಯಾನೇಜರ್ ಅವರನ್ನು ಒಳಗೊಂಡು ಸಭೆ ಕರೆದು ವಿದ್ಯಾರ್ಥಿ ಮುಖಂಡರ ಜೊತೆ ಸಭೆ ಮಾಡಿ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.