ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಾಲಾ-ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಜೊತೆಗೆ ವಿವಿಧ ಪ್ರೇಕ್ಷಣೀಯ ಹಾಗೂ ಶಾಸನಬದ್ಧ ಸಂಸ್ಥೆಗಳನ್ನು ನೋಡಲು ಅವಕಾಶ ಕಲ್ಪಿಸುವ ಮೂಲಕ ಅವರಲ್ಲಿ ಕನಸು ಬಿತ್ತುವ ಕೆಲಸಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಮುಂದಾದರು.
ಶಿರಹಟ್ಟಿ ತಾಲೂಕಿನ ವಿದ್ಯಾರ್ಥಿಗಳಿಗೆ ಅಂತಹ ಅವಕಾಶ ಕಲ್ಪಿಸಿ ಮಾದರಿಯಾಗಿದ್ದಾರೆ. ಕಳೆದ ವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನವನ್ನು ವೀಕ್ಷಿಸುವ ಅವಕಾಶವನ್ನು ಶಿರಹಟ್ಟಿ ತಾಲೂಕಿನ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಲ್ಪಿಸಿ ಖುದ್ದಾಗಿ ಎಲ್ಲಾ ವಿದ್ಯಾರ್ಥಿ/ಸಿಬ್ಬಂದಿಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಬರಮಾಡಿಕೊಂಡು ವಿಶೇಷ ಕಾಳಜಿ ಹಾಗೂ ಮುತುವರ್ಜಿ ವಹಿಸಿ ಅಧಿವೇಶನ ನಡೆಯುವ ಸ್ಥಳ, ಕಲಾಪಗಳ ವೀಕ್ಷಣೆ, ವಿವಿಧ ಮಹತ್ವದ ಜಾಗಗಳನ್ನು ವಿದ್ಯಾರ್ಥಿಗಳಿಗೆ ಸ್ವತಃ ತೋರಿಸಿ ಅವುಗಳ ಮಹತ್ವದ ಕುರಿತು ವಿವರಿಸಿದರು.
ಇಂದಿಗೂ ಶಾಸಕ ಡಾ. ಚಂದ್ರು ಲಮಾಣಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿದಾಗ ಸ್ವತಃ ಪಾಠ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಓದಿನತ್ತ ಆಸಕ್ತಿ ಹೆಚ್ಚಿಸಿ ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲಕು ಹಾಕಿ, ಅವರಲ್ಲಿ ಸುಂದರ ಕನಸು ಕಟ್ಟುವ ಕೆಲಸವನ್ನು ಮಾಡುತ್ತಿರುವುದನ್ನು ಶಿಕ್ಷಕ ಸಮೂಹ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ.
ಈ ಸಂದರ್ಭದಲ್ಲಿ ಡಾ. ಬಸವರಾಜ ಧಾರವಾಡ, ಡಾ. ಬಿ.ಜಿ. ಜವಳಿ, ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಎಂ. ಅಗಡಿ, ಎಂ.ಎಸ್. ಶಿವಶೆಟ್ಟಿ, ಅವಿನಾಶ ಸಾಲಮನಿ ಸೇರಿದಂತೆ ಶಾಲಾ-ಕಾಲೇಜುಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.



