ಬಿಗ್ ಬಾಸ್ ಸೀಸನ್ 11 ದಿನ ಕಳೆದಂತೆ ಸಾಕಷ್ಟು ಕುತೂಹಲದಿಂದ ಮೂಡಿ ಬರುತ್ತಿದೆ. ಫಿನಾಲೆಗೆ ಇನ್ನೇನೋ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆ, ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ.
ವೀಕೆಂಡ್ ನಲ್ಲಿ ಕಳೆದ ವಾರ ನಡೆದ ತಪ್ಪುಗಳನ್ನು ಕಿಚ್ಚ ಸುದೀಪ್ ಅವರು ಇಂದು ಬಯಲಿಗೆಳೆದಿದ್ದಾರೆ. ಅಲ್ಲದೇ ಕ್ಯಾಪ್ಟನ್ ಆಗಿರುವ ಭವ್ಯಾಗೌಡರ ಮೋಸದ ಆಟದ ವಿಡಿಯೋವನ್ನು ತೋರಿದ್ದಾರೆ. ವಿಡಿಯೋ ನೋಡಿ ಉಳಿದ ಸ್ಪರ್ಧಿಗಳು ಶಾಕ್ ಆಗಿದ್ದು, ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದ್ದಾರೆ.
ಹೌದು, ಬಿಗ್ಬಾಸ್ ಕೊಟ್ಟ ಒಂದು ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ನಡೆದ ಮೋಸ ಈಗ ಇಡೀ ಮನೆ ಅನುಭವಿಸುತ್ತಿದೆ. ಒಂದು ಕಡೆ ಭವ್ಯಾ ಗೌಡ ಗೊತ್ತಿದ್ದು ಗೊತ್ತಿದ್ದು ತಪ್ಪು ಮಾಡಿದ್ದು, ಇನ್ನೊಂದು ತಪ್ಪು ಕಣ್ಣು ಮುಂದೆ ಕಾಣಿಸಿದ್ರೂ ರಜತ್ ಧ್ವನಿಯೆತ್ತಿಲ್ಲ. ಹೀಗೆ ಇಬ್ಬರು ಮಾಡಿದ ಆ ಒಂದು ತಪ್ಪಿಗೆ ಇಡೀ ಮನೆ ಈಗ ಸಂಕಷ್ಟದಲ್ಲಿದೆ.
ವೇದಿಕೆ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಮೊದಲು ಭವ್ಯಾ ಗೌಡಗೆ ಅಭಿನಂದನೆ ತಿಳಿಸಿದ್ದಾರೆ. ಇದಾದ ಬಳಿಕ ಭವ್ಯಾ ಅವರೇ ಎಲ್ಲಿಂದ ಬಿದ್ದಿತ್ತು ಬಾಲ್ ಅಂತ ಶಾಕ್ ಕೊಟ್ಟಿದ್ದಾರೆ. ಜೊತೆಗೆ ವಿಡಿಯೋ ಕ್ಲಿಪ್ ಎಲ್ಲರ ಮುಂದೆ ತೋರಿಸಿ, ರಜತ್ ಅವರಿಗೆ ಗೊತ್ತಿದೆ ಅದು 9ನೇ ನಂಬರಿನಿಂದ ಬಿದ್ದಿದೆ ಅಂತ ಹೇಳಿದ್ದಾರೆ. ಆಗ ರಜತ್ ನಾನು ಹೇಳಿದೆ ಸರ್ ಆಗ ಭವ್ಯಾ ಸುಮ್ನೆ ಇರಿ ಅಂತ ಹೇಳಿದ್ರು ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿಸಿಕೊಂಡ ಮನೆ ಮಂದಿ ಶಾಕ್ ಆಗಿದ್ದಾರೆ.
ಈ ಬಗ್ಗೆ ಬ್ರೇಕ್ ಕೊಟ್ಟಾಗ, ಚೈತ್ರಾ, ಮೋಕ್ಷಿತಾ ಹಾಗೂ ರಜತ್ ನಡುವೆ ಪ್ರಸ್ತಾಪ ಆಗಿದೆ. ತಪ್ಪು ಮಾಡಿದ್ದವರಿಗಿಂತ, ಸತ್ಯ ಮುಚ್ಚಿಟ್ಟಿರುವ ಬಗ್ಗೆ ಚೈತ್ರಾ ಅವರು ರಜತ್ಗೆ ಸಖತ್ ಕ್ಲಾಸ್ ತೆಗೆದುಕೊಂಡರು. ಸುಮ್ಮನಿದ್ದಿದ್ದು ತಪ್ಪು ಎಂದು ಚೈತ್ರಾ ವಾದಿಸಿದರು.
ರಜತ್ ಕೂಡ ಕೆಂಡಾಮಂಡಲವಾಗಿ ಥೂ ಎಂದು ಉಗಿದರು. ಅದಕ್ಕೆ ಚೈತ್ರಾ ಅವರು ಇದೆಲ್ಲ ನಿಮ್ಮ ಯೋಗ್ಯತೆ. ನಿಮ್ಮ ರೌಡಿಸಂ ಇಲ್ಲಿ ಬೇಡ ಎಂದು ಮೈ ಮೇಲೆ ಎಗರಿದ್ದಾರೆ. ಇದೀಗ ಈ ಒಂದು ಸತ್ಯ ಇಡೀ ಮನೆಯನ್ನು ರಣರಂಗವಾಗಿಸಿದೆ.
ಮತ್ತೊಂದು ಕಡೆ ಮಾಡಿದ ತಪ್ಪಿಗೆ ಭವ್ಯಾ ಗೌಡ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಇದರ ಮಧ್ಯೆ ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗುವ ಸ್ಪರ್ಧಿ ಯಾರಿರಬಹುದು ಅಂತ ವೀಕ್ಷಕರು ಗೊಂದಲದಲ್ಲಿದ್ದಾರೆ.