ಬೆಂಗಳೂರು: ಹೆಗ್ಗನಹಳ್ಳಿ, ಗಜಾನನ ನಗರ ಪ್ರದೇಶದಲ್ಲಿ ಯುವಕನೊಬ್ಬಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿದೆ. ಬ್ಯಾಡರಹಳ್ಳಿ ಚೇತನ ಸರ್ಕಲ್ ಬಳಿ ಸ್ಕ್ರಾಪ್ ಗೋದಾಮು ನಡೆಸುತ್ತಿದ್ದ ಅಬ್ದುಲ್ ಹುಸೇನ್ (29) ಮೃತ ಯುವಕ. ಹೌದು ಮೃತ ಯುವಕ ಬ್ಯಾಡರಹಳ್ಳಿಯ ಚೇತನ ಸರ್ಕಲ್ ಬಳಿ ಸ್ಕ್ರಾಪ್ ಗೋಡೌನ್ ನಡೆಸುತ್ತಿದ್ದನು.
ಗೋಡೌನ್ ಬಳಿಯ ಮನೆಯೊಂದರ ಯುವತಿಯೊಂದಿಗೆ ಅಬ್ದುಲ್ಗೆ ಪರಿಚಯವಿತ್ತು. ನಿನ್ನೆ ರಾತ್ರಿ ಯುವತಿಯನ್ನು ನೋಡಲು ಬಂದಿದ್ದ ಅಬ್ದುಲ್ ಹುಸೇನ್ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾನೆ. ನಂತರ ಅಬ್ದುಲ್ ಸಾವಿನ ಬಗ್ಗೆ ಯುವತಿಯ ತಂದೆ ಆತನ ಸಹೋದರನಿಗೆ ಕರೆ ಮಾಡಿ “ನಿಮ್ಮ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಹೇಳಿದ್ದರು. ಯುವತಿ ಕುಟುಂಬದವರು ಮೃತದೇಹವನ್ನು ಆಟೋದಲ್ಲಿ ಇರಿಸಿ ಅಬ್ದುಲ್ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
ನಂತರ ಕುಟುಂಬಸ್ಥರು ಮೃತದೇಹವನ್ನು ಪೊಲೀಸರಿಗೆ ಹಸ್ತಾಂತರಿಸಿ, ಕೊಲೆ ಆರೋಪ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಅಬ್ದುಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತೆ ಕಾಣುತ್ತಿದೆ ಎಂದು ತಿಳಿಸಿದ್ದಾರೆ.
ಯುವತಿ ಕುಟುಂಬದವರು ನೇಣಿನಿಂದ ಇಳಿಸಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಗಲಾಟೆಯಾಗಬಹುದೆಂಬ ಭಯಕ್ಕೆ ಆಟೋದಲ್ಲಿ ಮೃತದೇಹವನ್ನು ಇಟ್ಟು ಕಾಲ್ಕಿತ್ತಿದ್ದರು ಎಂದು ಮೂಲ ಮಾಹಿತಿ ಸಿಕ್ಕಿದೆ. ಆದರೆ ಮೃತನ ಕುಟುಂಬಸ್ಥರು ಈ ವಿವರಣೆಯನ್ನು ಒಪ್ಪದೆ “ಯುವತಿ ಕುಟುಂಬದವರೇ ಕೊಲೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಯುವತಿ ಕುಟುಂಬಸ್ಥರಿಂದ ಸಾವಿನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.


