ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿ: ಜ.ಫಕೀರಸಿದ್ಧರಾಮ ಮಹಾಸ್ವಾಮಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನೂತನ ದಂಪತಿಗಳು ಆದರ್ಶ ದಂಪತಿಗಳಾಗಿ ಬಾಳಲಿ, ಕುಟುಂಬ ಯೋಜನೆ ಪಾಲಿಸಿ ಮಕ್ಕಳನ್ನು ಧರ್ಮದ ಹಾದಿಯಲ್ಲಿ ಮುನ್ನಡೆಸುವ ಮೂಲಕ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪಾಲಿಸಲು ಅವರಿಗೆ ಮಾರ್ಗದರ್ಶನ ನೀಡಲಿ ಎಂದು ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠದ ಪೂಜ್ಯ ಜ.ಫಕೀರಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಕುಕನೂರ ತಾಲೂಕಿನ ಭಟಪನಹಳ್ಳಿ ಗ್ರಾಮದ ಭೀಮಾಂಬಿಕಾದೇವಿಯ ಮಠದಲ್ಲಿ ಶ್ರೀ ಭೀಮಾಂಬಿಕಾದೇವಿಯ ಜಾತ್ರಾ ಮಹೋತ್ಸವ, ಭೀಮಾಂಬಿಕಾದೇವಿಯ ಪುರಾಣ ಮಹಾಮಂಗಲ, ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ದಯಪಾಲಿಸಿದರು.

ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ನೀಡಬೇಕು. ಅವರಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರ ಬದುಕು ಆದರ್ಶಮಯವಾಗಿ ರೂಪುಗೊಳ್ಳುವಂತೆ ಮಾಡಲು ಪಾಲಕ-ಪೋಷಕರು ಮುಂದಾಗಬೇಕು. ಭಟಪನಹಳ್ಳಿ ಗ್ರಾಮಸ್ಥರು ಧರ್ಮವಂತರು, ಸಂಸ್ಕಾರವಂತರಾಗಿದ್ದು ಪ್ರತಿ ವರ್ಷ ಜಾತ್ರೆ, ಪುರಾಣ, ಸಾಮೂಹಿಕ ವಿವಾಹ ಏರ್ಪಡಿಸಿಕೊಂಡು ಬಂದಿರುವದು ಶ್ಲಾಘನೀಯ. ಮುಂದಿನ ಜಾತ್ರೆಯೊಳಗೆ ಭೀಮಾಂಬಿಕಾದೇವಿಯ ಮಠಕ್ಕೆ ಹೊಸ ತೇರು ಬರಬೇಕು. ಅದಕ್ಕಾಗಿ ವಾಗ್ದಾನ ಮಾಡಿದ ಭಕ್ತಾಧಿಗಳು 15 ಲಕ್ಷ ರೂ.ಗಳನ್ನು ನೀಡಿ ಈ ಕೈಂಕರ್ಯವನ್ನು ಸಾಕಾರಗೊಳಿಸಬೇಕೆಂದರು.

ತುರವಿಹಾಳದ ಪೂಜ್ಯ ಮಹಾದೇವಯ್ಯ ಗುರುವಿನ ಅವರು ಮಾತನಾಡಿ, ಧರ್ಮ, ಧಾರ್ಮಿಕತೆಗೆ ಹೆಸರಾಗಿರುವ ಭಟಪನಹಳ್ಳಿ ಗ್ರಾಮಸ್ಥರು ಭಕ್ತವಂತರು, ನೀತಿವಂತರಾಗಿದ್ದು, ಪ್ರತಿ ವರ್ಷ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವದು ಅನುಕರಣೀಯ ಎಂದರು.

ಕಾಟ್ರಳ್ಳಿಯ ಪಂ. ಶಾಂತವೀರಯ್ಯ ಶಾಸ್ತ್ರಿಗಳ ದೇವಿಯ ಪುರಾಣಕ್ಕೆ ಕಲಬುರ್ಗಿಯ ಶಶಿಧರ ಗವಾಯಿಗಳು ಕುರಹಟ್ಟಿಯ ಬಸವರಾಜ ಹುಯಿಲಗೋಳ ಸಂಗೀತ ಸಾಥ್ ನೀಡಿದರು.

ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಸದಸ್ಯ ಡಾ. ಎಚ್.ಡಿ. ಪಾಟೀಲ, ಹೇಮಲತಾ ಹುಚ್ಚನಗೌಡ ಪಾಟೀಲ ಸೇರಿದಂತೆ ಗ್ರಾಮದ ಗುರು-ಹಿರಿಯರು ಪುರಾಣದದಲ್ಲಿ ಬರುವ ಭೀಮಾಂಬಿಕಾದೇವಿಯ ಮದುವೆ ಸನ್ನಿವೇಶವನ್ನು ನೆರವೇರಿಸಿದರು. ಜಾತ್ರಾ ಸಮಿತಿಯ ಎಲ್ಲ ಪದಾಧಿಕಾರಿಗಳು, ಗ್ರಾಮದ ಹಿರಿಯರು ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿರುವದನ್ನು ಡಾ.ಹುಚ್ಚನಗೌಡ ಪಾಟೀಲರು ಶ್ಲಾಘಿಸಿದರು.

ಉಚಿತ ಸಾಮೂಹಿಕ ವಿವಾಹದಲ್ಲಿ 13 ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಜರುಗಿತು. ಕಾರ್ಯಕ್ರಮದಲ್ಲಿ ಹುಚ್ಚೀರಯ್ಯ ಭದ್ರಾಪೂರ, ಹಂಚಾಳಪ್ಪ ಕಲಗುಡಿ, ಪರಸಪ್ಪ ಹೊಸಮನಿ, ಶರಣಪ್ಪ ಹಾದಿಮನಿ, ಮಲ್ಲಿಕಾರ್ಜುನ ಕರಮುಡಿ, ಮಲ್ಲಪ್ಪ ಗುಡಿಹಿಂದಲ, ರಾಮಚಂದ್ರ ಜೋಗಿನ, ಭೀಮಣ್ಣ ಉದ್ಧಾರ, ರಾಜಶೇಖರ ಕರಮುಡಿ, ಯಲ್ಲಪ್ಪ ಕಲಗುಡಿ, ದೇವಪ್ಪ ಬಾವಿಕಟ್ಟಿ, ಯಲ್ಲಪ್ಪ ಗುರಿಕಾರ, ವಿಜಯಕುಮಾರ ಕಾಗಿ, ಶ್ರೀಧರ ಹೊಸಮನಿ, ಚನ್ನಪ್ಪ ವಾಲಿಕಾರ, ಕಿರಣ ಗುದ್ಯಾಡಿ, ಹನಮಪ್ಪ ಗಾಳಿ, ಯಲ್ಲಪ್ಪ ದೇವರಳ್ಳಿ, ಬಸಪ್ಪ ಕುಡಗುಂಟಿ, ಯಲ್ಲಪ್ಪ ತೊಂಡಿಹಾಳ ಮುಂತಾದವರಿದ್ದರು.

ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಪೂಜ್ಯ ಡಾ. ಮಹಾದೇವ ಮಹಾಸ್ವಾಮಿಗಳು ಮಾತನಾಡಿ, ಬೆಲೆ ಏರಿಕೆಯ ಇಂದಿನ ದಿನಮಾನಗಳಲ್ಲಿ ಮಕ್ಕಳ ಮದುವೆ ಮಾಡಲು ಹೆತ್ತವರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಈ ಸೂಕ್ಷ್ಮಮತೆಯನ್ನು ಅರಿತು ಜಾತ್ರಾ ಸಮಿತಿಯ ಪದಾಧಿಕಾರಿಗಳು ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿಕೊಂಡು ಬಂದಿರುವದು ಅಭಿನಂದನೀಯ ಎಂದರು.


Spread the love

LEAVE A REPLY

Please enter your comment!
Please enter your name here