ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಕಳಸಾಪೂರದ ಕಪ್ಪತ್ತಗಿರಿ ಫೌಂಡೇಷನ್ ವತಿಯಿಂದ ಸೆ. 28, 29ರಂದು ನಡೆಯಲಿರುವ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗದಗ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ, ಕೃತಿ ಬಿಡುಗಡೆ ಹಾಗೂ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ತಮ್ಮ ಇಡೀ ಜೀವನವನ್ನೇ ಶಿಕ್ಷಣ ಕ್ಷೇತ್ರಕ್ಕೆ ಮೀಸಲಾಗಿಟ್ಟವರು, ಮಕ್ಕಳ ಬದುಕಿಗಾಗಿ ಹಗಲಿರುಳು ಶ್ರಮಸಿದವರು, ಶರಣ ಚಿಂತಕರು, ಸಾಹಿತಿಗಳೂ ಆದ ಡಾ. ಪಂಚಯ್ಯ ಹಿರೇಮಠ ಅವರು ಈ ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಆಹ್ವಾನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಳಸಾಪೂರ ಗ್ರಾಮದ ಹಿರಿಯರಾದ ಶರದ್ರಾವ್ ಹುಯಿಲಗೋಳ ಹಾಗೂ ಸಿ.ಬಿ. ಪಲ್ಲೇದ, ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಡಾ. ಪಂಚಯ್ಯ ಹಿರೇಮಠ ಆಯ್ಕೆಯಾಗಿರುವುದು ಕಾರ್ಯಕ್ರಮದ ತೂಕವನ್ನು ಹೆಚ್ಚಿಸಿದೆ ಎಂದರು.
ಈ ಸಂದರ್ಭದಲ್ಲಿ ಬಸವ ಕೇಂದ್ರದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಖಂಡಮ್ಮನವರ, ಗ್ರಾಮದ ಹಿರಿಯರು, ಸಾಹಿತಿಗಳಾದ ಮಹಾಂತೇಶ ಬೇರಗಣ್ಣವರ ಉಪಸ್ಥಿತರಿದ್ದರು ಎಂದು ಕಪ್ಪತ್ತಗಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಎಂ.ಇಟಗಿಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.