ಕಲಬುರ್ಗಿ:– ದೇಶದ ಐಕ್ಯತೆಗಾಗಿ ಮೋದಿ ಸರ್ಕಾರ ಏನೇ ಕ್ರಮ ಕೈಗೊಂಡರೂ ನಮ್ಮ ಬೆಂಬಲವಿದೆ ಎಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬರೀ ಭಾಷಣ ಮಾಡಿಕೊಂಡು ಕುಳಿತರೆ ಆಗಲ್ಲ. ನಮ್ಮನ್ನ ಕೆಣಕಿದವರಿಗೆ ತಕ್ಕ ಉತ್ತರ ಕೊಡಬೇಕು. ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು. ಆದರೆ ಇದರಲ್ಲೂ ರಾಜಕೀಯ ಆಗಬಾರದು. ನಮ್ಮ ದೇಶದನ್ನು ಕೆಣಕಿದ್ರೆ ನಾವು ಸುಮ್ಮನಿರಬಾರದು. ಪಾಕಿಸ್ತಾನದ ಮೇಲೆ ಕ್ರಮ ಆಗಲಿ ಎಂದು ನಾವು ಬೆಂಬಲ ಕೊಟ್ಟಿದ್ದೇವೆ. ನಮಗೆ ದೇಶ ಮುಖ್ಯ. ಹೀಗಾಗಿ ಯಾವುದೇ ಕ್ರಮ ಕೈಗೊಂಡರೂ ನಮ್ಮ ಬೆಂಬಲ ಇರುತ್ತದೆ ಎಂದರು.
ಜಾತಿ ಜನಗಣತಿ ಬಗ್ಗೆ ನಾವು ಮೊದಲೇ ಆಗ್ರಹಿಸಿದ್ದೆವು. ಆದರೆ ಆಗ ಜಾತಿ ವಿಷಬೀಜ ಬಿತ್ತುತ್ತಾರೆ ಎಂದು ನಮ್ಮನ್ನು ಹೀಯಾಳಿಸಿದ್ದರು. ಬಿಹಾರ ಚುನಾವಣಾ ಗಿಮಿಕ್ ಇರಬಹುದು. ಆದರೆ ನಾನು ಅದರ ಬಗ್ಗೆ ಮಾತನಾಡಲ್ಲ. ದುರುದ್ದೇಶದಿಂದ ನೀವು ನಡೆದುಕೊಂಡರೆ ಯಾರೂ ಸಹಿಸಲ್ಲ. ಒಳ್ಳೆಯ ಉದ್ದೇಶದಿಂದ ಮಾಡಿ ಎಂದು ತಿಳಿಸಿದರು.