ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಆತ್ಮನಿರ್ಭರ ಭಾರತ ಅಭಿಯಾನ (ಸ್ವಾವಲಂಬಿ ಭಾರತ ಅಭಿಯಾನ) ಎಂದರೆ ಭಾರತವನ್ನು ಆರ್ಥಿಕವಾಗಿ ಸ್ವಾವಲಂಬಿ ರಾಷ್ಟ್ರವನ್ನಾಗಿ ರೂಪಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರದ ಒಂದು ವಿಶಾಲ ಕಾರ್ಯತಂತ್ರವಾಗಿದ್ದು, ದೇಶೀಯ ಉತ್ಪಾದನೆ, ಸ್ಥಳೀಯ ಉದ್ಯಮಗಳಿಗೆ ಬೆಂಬಲ ಮತ್ತು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ವಿಶ್ವ ಮಟ್ಟದ ಪೂರೈಕೆ ಸರಪಳಿಗಳ ಕೇಂದ್ರವಾಗಿ ಭಾರತವನ್ನು ರೂಪಿಸುವುದಾಗಿದೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಸಭಾ ಭವನದಲ್ಲಿ ಸೋಮವಾರ ಬಿಜೆಪಿ ರೋಣ ಮಂಡಲ, ನರೇಗಲ್ಲ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಆತ್ಮನಿರ್ಭರ ಭಾರತ ಸ್ವಾವಲಂಬಿ ಭಾರತ ಅಭಿಯಾನಡಿ ಸ್ವದೇಶಿ ವಸ್ತುಗಳ ಬಳಕೆ ಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಪ್ರಾರಂಭಿಸಲಾದ ಈ ಅಭಿಯಾನವು ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯಾಶಾಸ್ತ್ರ ಮತ್ತು ಬೇಡಿಕೆಯ ಐದು ಸ್ತಂಭಗಳ ಮೇಲೆ ನಿಂತಿದೆ. ಆತ್ಮನಿರ್ಭರ ಭಾರತವು ಭಾರತವನ್ನು ತನ್ನದೇ ಆದ ಶಕ್ತಿಯಿಂದ ಜಾಗತಿಕ ವೇದಿಕೆಯಲ್ಲಿ ಬಲಿಷ್ಠ ರಾಷ್ಟ್ರವಾಗಿ ಬೆಳೆಯಲು ಸಹಾಯ ಮಾಡುವ ಒಂದು ಸಮಗ್ರ ದೃಷ್ಟಿಕೋನವಾಗಿದೆ. ಸ್ಥಳೀಯ ತಯಾರಕರು ಮತ್ತು ಸೇವಾ ಪೂರೈಕೆದಾರರ ಮೇಲೆ ಹೆಚ್ಚಿನ ಗಮನ ಹರಿಸುವ ಮೂಲಕ ರಾಷ್ಟ್ರವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಈ ಪರಿಕಲ್ಪನೆಯ ಕೇಂದ್ರಬಿಂದುವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರದಾನ ಕಾರ್ಯದರ್ಶಿ ಆರ್.ಕೆ. ಚವ್ಹಾಣ, ರೋಣ ಮಂಡಲ ಅಧ್ಯಕ್ಷ ಉಮೇಶ ಮಲ್ಲಾಪೂರ, ನಗರ ಘಟಕ ಅಧ್ಯಕ್ಷ ಉಮೇಶ ಸಂಗನಾಳಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ಗದಗ ಜಿಲ್ಲಾ ಕಾನಿಪ ಉಪಾಧ್ಯಕ್ಷ ಪ್ರಭುಸ್ವಾಮಿ ಅರವಟಗಿಮಠ, ಸದಸ್ಯ ನಿಂಗರಾಜ ಬೇವಿನಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷ ಮುತ್ತಣ್ಣ ಕಡಗದ, ಅಶೋಕ ನವಲಗುಂದ, ಶಶಿಧರ ಸಂಕನಗೌಡ್ರ, ಬಸವರಾಜ ಬೆಲ್ಲದ, ಮುತ್ತಣ್ಣ ಪಲ್ಲೇದ, ಹುಲ್ಲಪ್ಪ ಕೆಂಗಾರ, ಭೀಮಪ್ಪ ಮಾದರ, ಸಲೀಂ ಕಲಾದಗಿ, ಶಂಕಟ ಇಟಗಿ, ಬಸವರಾಜ ಕೋಟಗಿ, ಮಹೇಶ ಶಿವಶಿಂಪರ, ಸುರೇಶ ನಾಯ್ಕರ, ರುದ್ರಮುನಿ ಹಿರೇಮಠ, ನಿಂಗಪ್ಪ ಕಣವಿ, ಎಂ.ಎ. ಮಾಲಗಿತ್ತಿಮಠ, ಎಫ್.ಎ. ಕುದರಿ, ಮಂಜುನಾಥ ಕಮಲಾಪೂರ ಸೇರಿದಂತೆ ಇತರರಿದ್ದರು.
ಇದು ಆರ್ಥಿಕತೆಯನ್ನು ಬಲಪಡಿಸುತ್ತದೆ, ಜೀವನ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಮುಖ್ಯವಾಗಿ ದೇಶದ ವ್ಯಾಪಾರ ಕೊರತೆ ಮತ್ತು ಖಜಾನೆ ಸಮತೋಲನವನ್ನು ಸುಧಾರಿಸುತ್ತದೆ. ಉತ್ಪಾದನೆಯಿಂದ ಹಿಡಿದು ಪೂರೈಕೆಯವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವುದು. ಇದು ದೇಶವು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಫ್ತಿಗೆ ಉತ್ತೇಜನ ನೀಡುತ್ತದೆ. ಆಮದು ಇಳಿಕೆಯು ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅಂತಿಮವಾಗಿ ವ್ಯಾಪಾರ ಹೆಚ್ಚುವರಿಗೆ ಕಾರಣವಾಗುತ್ತದೆ ಎಂದು ಕಳಕಪ್ಪ ಬಂಡಿ ಹೇಳಿದರು.



