ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಪರಿಸರ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಸರಾಗಿದ್ದು, ವಿಶೇಷವಾಗಿ ಜಾತ್ರಾ ಕಾರ್ಯಕ್ರಮಗಳಿಗೆ ನಾಡಿನಾದ್ಯಂತ ಹೆಸರಾಗಿದೆ. ಉಸಗಿನಗಟ್ಟಿಯ ಗಂಜೀ ಬಸವೇಶ್ವರ ಜಾತ್ರೆಗೆ ಸಹ ಅದರದ್ದೇ ಆದ ಐತಿಹಾಸಿಕ ಮಹತ್ವವಿದೆ ಎಂದು ಉಸಿರು ಫೌಂಡೇಶನ್ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರಾದ ಶರಣ್ ಪಾಟೀಲ ನುಡಿದರು.
ಅವರು ನಗರದ ಉಸುಗಿನಗಟ್ಟಿಯ ಗಂಜೀ ಬಸವೇಶ್ವರ ಜಾತ್ರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಇತ್ತೀಚಿನ ಬೆಳವಣಿಗೆಗಳಲ್ಲಿ ಕಾಶ್ಮೀರ ಯುದ್ಧಭೂಮಿಯಾಗಿ ಪರಿವರ್ತನೆಯಾಗುತ್ತಿದ್ದು, ನಾವಿಲ್ಲಿ ರಂಗಭೂಮಿಯಂಥ ಮನರಂಜನಾ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರೆ ಅಲ್ಲಿ ಯೋಧರು ಯುದ್ಧಭೂಮಿಯಲ್ಲಿ ಕಾದಾಡಬೇಕಿದೆ ಎಂದರು.
ಎಸ್.ಎಸ್.ಎಲ್.ಸಿ ಫಲಿತಾಶಂದ ಕುರಿತು ಮಾತನಾಡಿದ ಅವರು, ಗದಗ ಜಿಲ್ಲೆಯ ಫಲಿತಾಂಶದಲ್ಲಿ ಚೇತರಿಕೆ ಕಂಡುಬಂದಿದ್ದರೂ ಫಲಿತಾಂಶ ಸಮಾಧಾನಕರವಾಗಿಲ್ಲ. ಆದ್ದರಿಂದ ಮಕ್ಕಳಿಗೆ ವಿದ್ಯಾಭ್ಯಾಸದ ಮಹತ್ವದ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು. ಮುಂದಿನ ದಿನಗಳಲ್ಲಿ ಉಸಿರು ಫೌಂಡೇಶನ್ನಿಂದ ಎಸ್.ಎಸ್.ಎಲ್.ಸಿಯಲ್ಲಿ ಶೇ.75ಕ್ಕಿಂತ ಹೆಚ್ಚಿನ ಅಂಕ ಪಡೆದ ಗದಗ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಶೇಷ ತರಬೇತಿ ನೀಡಲಾಗುವುದು ಎಂದರು.
ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನ್ನಿಧ್ಯ ವಹಿಸಿದ್ದರು. ಶಿವಾನಂದ ಪಲ್ಲೇದ, ಪ್ರಶಾಂತ ಶಾಬಾದಿಮಠ, ಈರಣ್ಣ ಕರಿಬಿಷ್ಠಿ, ಎಫ್.ವಿ. ಮರಿಗೌಡ್ರ, ಎಚ್.ಕೆ. ಮುಲ್ಲಾ, ಎಂ.ಎಸ್. ಕರಿಗೌಡ್ರ, ರವಿ ಕಮತರ ಸೇರಿದಂತೆ ಅನೇಕ ಗಣ್ಯರು ವೇದಿಕೆ ಮೇಲಿದ್ದರು. ಸಭಾ ಕಾರ್ಯಕ್ರಮದ ನಂತರ `ಅಕ್ಕ ಅಂಗಾರ ತಂಗಿ ಬಂಗಾರ’ ಸಾಮಾಜಿಕ ನಾಟಕ ಪ್ರದರ್ಶನ ಜರುಗಿತು.