ಮಂಡ್ಯ:- ವಕ್ಫ್ ನಿಂದ ಆಗುತ್ತಿರುವ ಅನ್ಯಾಯನ್ನು ಖಂಡಿಸಿ ರೈತರು ಮತ್ತು ಹಿಂದೂ ಸಂಘಟನೆಗಳು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದು, ಇಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಕ್ಫ್ ಬೋರ್ಡ್ ಆತಂಕವನ್ನೇ ಸೃಷ್ಟಿ ಮಾಡಿದೆ. ಕಿರಂಗೂರು, ಶೆಟ್ಟಿಹಳ್ಳಿ, ಬಾಬುರಾಯನಕೊಪ್ಪಲು, ದರಸಕುಪ್ಪೆ ಗ್ರಾಮದ 50ಕ್ಕೂ ಹೆಚ್ಚು ರೈತರ ಆರ್ಟಿಸಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಎಂದು ನಮೂದು ಆಗಿದೆ.
ಆರ್ಟಿಸಿಯಲ್ಲಿ ಸ್ವಾಧೀನದಾರರ ಕಲಂ ನಲ್ಲಿ ರೈತರ ಹೆಸರಿದ್ದರೂ ಋಣ ಕಲಂ ನಲ್ಲಿ ವಕ್ಫ್ ಹೆಸರು ನಮೂದಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಸಾಮನ್ಯವಾಗಿ ಜಮೀನನ ಮೇಲೆ ಸಾಲ ತೆಗೆದುಕೊಂಡರೆ, ಕ್ರಯ ಮಾಡಿಸಿದರೆ ಮಾತ್ರ ಋಣ ಕಲಂ ನಲ್ಲಿ ಬ್ಯಾಂಕ್ ಅಥವಾ ವ್ಯಕ್ತಿಯ ಹೆಸರು ಉಲ್ಲೇಖವಾಗುತ್ತದೆ. ಆದರೆ ಬಹುತೇಕ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ರೈತರು ಜಮೀನು ಮಾರಾಟ, ಜಮೀನು ಹಂಚಿಕೆ ಮಾಡಿಕೊಳ್ಳುವ ಸಲುವಾಗಿ ಆರ್ಟಿಸಿ ಪರಿಶೀಲನೆ ಮಾಡಿದಾಗ ವಕ್ಫ್ ಭೂತ ಎಂಟ್ರಿಕೊಟ್ಟಿರುವುದು ಬೆಳಕಿಗೆ ಬಂದಿದೆ.
ಶ್ರೀರಂಗಪಟ್ಟಣ ಸುತ್ತ ಇರುವ ಮದ್ದಿನ ಮನೆ ಸೇರಿದಂತೆ ಪುರಾತತ್ವ ಇಲಾಖೆ ಹತ್ತಾರು ಹೆಚ್ಚು ಆರ್ಟಿಸಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿದೆ. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ವಕ್ಫ್ ಬೋರ್ಡ್ ಗೋಲ್ ಮಾಲ್ ಖಂಡಿಸಿ ಇಂದು ಶ್ರೀರಂಗಪಟ್ಟಣ ಟೌನ್ ಸ್ವಯಂ ಪ್ರೇರಿತ ಬಂದ್ಗೆ ಕರೆ ನೀಡಲಾಗಿದೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬಂದ್ ಮಾಡಿ ಹೋರಾಟ ಯಶಸ್ವಿಗೆ ಮನವಿ ಮಾಡಲಾಗಿದೆ.