ಮದ್ದೂರು ಉತ್ಸವ 2026 ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕುರಿತು ಭಾವುಕವಾಗಿ ಮಾತನಾಡಿ ಎಲ್ಲರ ಗಮನ ಸೆಳೆದರು. ಜೀವನದ ಕಷ್ಟದ ಸಮಯದಲ್ಲಿ ತಮ್ಮ ಬೆನ್ನಿಗೆ ನಿಂತ ವ್ಯಕ್ತಿ ಡಿಕೆ ಶಿವಕುಮಾರ್ ಎಂದು ಹೇಳಿದ ಅವರು, “ಈ ಜೀವ ನಿಮಗೇ ಅರ್ಪಣೆ ಸರ್” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರವಿಚಂದ್ರನ್, “ಮನುಷ್ಯನ ಜೀವನದಲ್ಲಿ ಕೆಲ ಸಂದರ್ಭಗಳು ತುಂಬ ಕಠಿಣವಾಗಿರುತ್ತವೆ. ಆ ಸಮಯದಲ್ಲಿ ಯಾರು ನಮ್ಮ ಕೈ ಹಿಡಿಯುತ್ತಾರೆ ಅನ್ನೋದು ಮುಖ್ಯ. ನಾನು ಯಾರ ಬಳಿಯೂ ಸಹಾಯ ಕೇಳುವ ವ್ಯಕ್ತಿ ಅಲ್ಲ. ಆದರೆ ನಾನು ಕೇಳುವ ಮುಂಚೆಯೇ ನನ್ನ ಕೈ ಹಿಡಿದವರು ಡಿಕೆ ಶಿವಕುಮಾರ್” ಎಂದು ಹೇಳಿದರು.
ಚಿತ್ರರಂಗದಲ್ಲಿ ನಾಲ್ಕು ದಶಕಗಳ ಪಯಣವನ್ನು ನೆನಪಿಸಿಕೊಂಡ ಅವರು, “ನಾನು ಬಿದ್ದಾಗಲೂ ಜನ ನನ್ನ ಕೈಬಿಡಲಿಲ್ಲ. ‘ರಾಮಾಚಾರಿ’ ಸಮಯದಿಂದಲೇ ಪ್ರೇಕ್ಷಕರು ನನ್ನ ಜೊತೆ ಇದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಡಿಕೆ ಶಿವಕುಮಾರ್ ಅವರು ನನಗೆ ಮಾಡಿದ ಸಹಾಯವನ್ನು ನಾನು ಎಂದಿಗೂ ಮರೆಯುವುದಿಲ್ಲ” ಎಂದು ಹೇಳಿದರು.
“ನಾವು 40-50 ವರ್ಷಗಳ ಸ್ನೇಹಿತರು. ಆದರೆ ನಾನು ಎಂದಿಗೂ ಆ ಸ್ನೇಹವನ್ನು ಸ್ವಾರ್ಥಕ್ಕೆ ಬಳಸಿಕೊಂಡಿಲ್ಲ. ಆದರೂ ಅವರು ನನ್ನ ಹೆಗಲ ಮೇಲೆ ಕೈ ಹಾಕಿ ‘ನಾನು ಏನು ಮಾಡಬೇಕು ಹೇಳಪ್ಪ’ ಎಂದು ಕೇಳಿದರು. ಆ ಮಾತು ಜೀವನಪೂರ್ತಿ ನೆನಪಿರುತ್ತದೆ” ಎಂದು ಭಾವುಕರಾದರು.
ಇದೇ ವೇಳೆ ಮದ್ದೂರು ಶಾಸಕ ಉದಯ್ ಅವರ ಸಹಾಯವನ್ನೂ ಸ್ಮರಿಸಿದ ರವಿಚಂದ್ರನ್, “ಅವರು ನನಗೆ ಗೊತ್ತಾಗದಂತೆ ಸಹಾಯ ಮಾಡಿದ್ದಾರೆ. ಸ್ನೇಹ ಮತ್ತು ಪ್ರೀತಿಗೆ ಮಾತ್ರ ನಾನು ತಲೆಬಾಗುತ್ತೇನೆ” ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ, “ಡಿಕೆ ಶಿವಕುಮಾರ್ ಎಲ್ಲಿರುತ್ತಾರೋ ಅಲ್ಲಿ ರವಿಚಂದ್ರನ್ ಇರುತ್ತಾರೆ” ಎಂದು ಹೇಳುವ ಮೂಲಕ ತಮ್ಮ ಆತ್ಮೀಯತೆಯನ್ನು ಬಹಿರಂಗಪಡಿಸಿದರು.



