ಭಗವದ್ಗೀತೆಯ ಸಂದೇಶ ಪ್ರತಿಯೊಬ್ಬರಿಗೂ ಅನ್ವಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: `ಕರ್ಮಣ್ಯೇ ವಾಧಿಕಾರಸ್ಥೆ ಮಾ ಫಲೇಶು ಕದಾಚನ’ ಎಂಬ ಭಗವದ್ಗೀತೆಯ ಸಂದೇಶದಂತೆ ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯಗಳನ್ನು ಪ್ರತಿಫಲಾಪೇಕ್ಷೆಯಿಲ್ಲದೇ ನಿಭಾಯಿಸಬೇಕು. ಈ ಸಂದೇಶವು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ ಎಂದು ರಾಜ್ಯದ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ನುಡಿದರು.

Advertisement

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶನಿವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರುಗಳ ಸಹಯೋಗದಲ್ಲಿ ಭಗವಾನ್ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.

ಶ್ರೀ ಕೃಷ್ಣ ಪರಮಾತ್ಮನು ಉಪದೇಶಿಸಿದ ಭಗವದ್ಗೀತೆಯು ವಿಶ್ವದಲ್ಲಿಯೇ ಪ್ರಸಿದ್ಧವಾಗಿದೆ. ಹಿಂದೂ ಸಂಸ್ಕೃತಿಯ ಪವಿತ್ರ ಗ್ರಂಥವಾಗಿದೆ. ಭಗವದ್ಗೀತೆ ಮೂಲಕ ಜನರಿಗೆ ಕೃಷ್ಣನು ನೀನು ಕರ್ತವ್ಯ ನಿಭಾಯಿಸು. ಪ್ರತಿಫಲ ಭಗವಂತನಿಗೆ ಬಿಡು ಎಂದು ಸಾರಿದ್ದಾನೆ. ಎಲ್ಲ ದೇವರನ್ನು ಒಂದೊಂದು ಜಾತಿಗೆ ಮಿತಿಗೊಳಿಸಲಾಗಿದೆ. ಕೃಷ್ಣ ಎಂಬ ಹೆಸರು ದೇಶದಲ್ಲಿ ಅತೀ ಹೆಚ್ಚು ಬಳಸುವ ಪದವಾಗಿದೆ. ಬದುಕಿನ ಎಲ್ಲ ಕ್ಷೇತ್ರಗಳ ಕೆಲಸಗಳಿಗೆ ಕೃಷ್ಣ ಪರಮಾತ್ಮನನ್ನು ನೆನಪಿಸಿಕೊಡುತ್ತದೆ. ನನ್ನ ಸಾರ್ವಜನಿಕ ಬದುಕಿನಲ್ಲಿ ಕೃಷ್ಣ ಎಂಬ ಹೆಸರಿನ ರಾಜಕಾರಣಿ, ಕೃಷ್ಣ ನೀರಾವರಿ ಯೋಜನೆಯಿಂದ ನನ್ನ ರಾಜಕೀಯ ಜೀವನ ಮೇಲ್ಪಂಕ್ತಿಗೆ ಬರಲು ಕಾರಣವಾಗಿದೆ. ಗೊಲ್ಲರನ್ನು ಗುರುತಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಯಾದವ ಸಮುದಾಯದ ಅಧ್ಯಕ್ಷ ಹರೀಶ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಾವಿತ್ರಮ್ಮ ಹಟ್ಟಿ ಅವರ ಭಾಮಿನಿ ಕೀರ್ತನೆ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಗೊಲ್ಲ ಸಮುದಾಯದವರನ್ನು ಸನ್ಮಾನಿಸಲಾಯಿತು.

ಮುಳಗುಂದದ ಆರ್.ಎನ್. ದೇಶಪಾಂಡೆ ಸ.ಪ್ರ.ದ ಕಾಲೇಜಿನ ಪ್ರಾಚಾರ್ಯ ಡಾ.ರಮೇಶ ಕಲ್ಲನಗೌಡರ ಶ್ರೀ ಕೃಷ್ಣನ ಜೀವನ ಮತ್ತು ಸಂದೇಶದ ಕುರಿತು ಉಪನ್ಯಾಸ ನೀಡಿದರು. ಲಿಟಲ್ ಚಾಂಪ್ಸ್ ಶಾಲೆಯ ಮಕ್ಕಳು ನೃತ್ಯ ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಹಾತಲಗೇರಿ ಗ್ರಾ.ಪಂ ಅಧ್ಯಕ್ಷ ರಾಮನಗೌಡ ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಎಸ್.ಎನ್. ಬಳ್ಳಾರಿ, ಕಡೆಮನಿ ಸೇರಿದಂತೆ ಸಮುದಾಯದ ಹಿರಿಯರು, ಗಣ್ಯರು ಹಾಜರಿದ್ದರು.

ಗದಗ ತಹಸೀಲ್ದಾರ ಶ್ರೀನಿವಾಸ ಮೂರ್ತಿ ಕುಲಕರ್ಣಿ ಸ್ವಾಗತಿಸಿದರು. ಬಾಹುಬಲಿ ಜೈನರ್ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ವಂದಿಸಿದರು.

 

ಈ ಮೊದಲು ಸರ್ಕಾರಿ ಅಧಿಕಾರಿಗಳ ನಡುವೆ ಮಾತ್ರ ಜಯಂತಿ ನಡೆಯುತ್ತಿದ್ದವು. ಈಗ ಜಯಂತಿಯ ಸ್ವರೂಪ ಬದಲಾಗಿರುವುದು ಖುಷಿ ತಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಅಭಿನಂದನಾರ್ಹ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಯಂತಿ ಮೂಲಕ ಸಮಾನತೆ ಸಾರುತ್ತಿದೆ ಎಂದು ಸಚಿವ ಎಚ್.ಕೆ. ಪಾಟೀಲ ನುಡಿದರು.


Spread the love

LEAVE A REPLY

Please enter your comment!
Please enter your name here