ಉಡುಪಿ:-ದೇವರ ಕಾಣಿಕೆ ಹಣ ಕದ್ದು ಪರಾರಿಯಾಗಿದ್ದ ಕಳ್ಳ (Thief) 24 ಗಂಟೆ ಒಳಗೆ ಸಿಕ್ಕಿಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ.
ದುಷ್ಟರನ್ನು ಶಿಕ್ಷಿಸುವುದು ಭಕ್ತಿಯಿಂದ ಬೇಡಿದವರನ್ನು ಪಾಲಿಸುವ ದೈವಗಳು ಅಪರಾಧಿಯನ್ನು ಕೂಡ ಪತ್ತೆ ಹಚ್ಚುವುದರಲ್ಲಿ ಭಕ್ತರ ಜೊತೆಗೆ ನಿಂತಿದೆ ಎನ್ನುವುದಕ್ಕೆ ಈ ಪ್ರಕರಣ ನಿದರ್ಶನ. ಹೊರ ಜಿಲ್ಲೆಯಿಂದ ಬಂದ ಕಳ್ಳನೋರ್ವ ಉಡುಪಿಯ ಚಿಟ್ಪಾಡಿ ಸಮೀಪದ ಕಸ್ತೂರ್ಬ ನಗರದ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಕಳ್ಳತನ ನಡೆಸಿದ್ದಾನೆ. ದೈವಸ್ಥಾನದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಹಣವನ್ನ ಕದ್ದು ಕಣ್ಮರೆಯಾಗಿದ್ದ ಕಳ್ಳನ ಪತ್ತೆಗಾಗಿ ದೈವಸ್ಥಾನದ ಭಕ್ತರು ದೇವರಲ್ಲಿ ಮೊರೆ ಇಟ್ಟಿದ್ದಾರೆ. ಭಕ್ತನ ಮೊರೆಗೆ ಓಗೊಟ್ಟ ದೈವ, ಕಳ್ಳನನ್ನ ನಂಬಲಸಾಧ್ಯವಾದ ರೀತಿಯಲ್ಲಿ ಪತ್ತೆ ಹಚ್ಚುವ ಮೂಲಕ ತನ್ನ ಇರುವಿಕೆಯನ್ನು ಭಕ್ತರಿಗೆ ತೋರಿಸಿದೆ.
ಉಡುಪಿಯ ಚಿಟ್ಪಾಡಿ ಕಸ್ತೂರ್ಬಾ ನಗರ ಬಬ್ಬು ಸ್ವಾಮಿ ಸನ್ನಿಧಾನದಲ್ಲಿ ಜು.4 ರ ನಡುರಾತ್ರಿ ದೈವಸ್ಥಾನದ ಕಾಣಿಕೆ ಡಬ್ಬಿ ಒಡೆದು ಕಳ್ಳತನ ನಡೆದಿತ್ತು. ಕಳ್ಳತನ ನಡೆದ ಮರುದಿನ ಅಂದರೆ ಜು.5 ಕಳ್ಳತನ ಪ್ರಕರಣ ಬೆಳಕಿಗೆ ಬಂದಿತ್ತು. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಕಳ್ಳನ ಪತ್ತೆಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದ್ದರು. ದೈವದ ಸನ್ನಿಧಾನದಲ್ಲಿ ಕಳ್ಳತನ ಮಾಡಿದರೆ ಅಪಚಾರವಾಗುವುದಿಲ್ಲವೇ? ಎಂದು ಭಕ್ತರು ದೈವಕ್ಕೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರವಾಗಿ 24 ಗಂಟೆಯೊಳಗೆ ಕಳ್ಳನನ್ನು ಹುಡುಕಿ ಕೊಡುವುದಾಗಿ ದೈವ ಭಕ್ತರಿಗೆ ಅಭಯ ನೀಡಿತ್ತು.
ಕಳ್ಳತನ ಮಾಡಿದ್ದ ಕಳ್ಳನ ಕೃತ್ಯ ಸಿಸಿ ಕ್ಯಾಮರದಲ್ಲಿ ಸರಿಯಾಗಿದ್ದನ್ನ ಬಹುತೇಕ ಭಕ್ತರು ಗಮನಿಸಿದ್ದರು. ಸಿಸಿ ಕ್ಯಾಮೆರಾದಲ್ಲಿ ನೋಡಿದ ಕಳ್ಳನ ಚಹರೆಯನ್ನು ಹೋಲುವ ವ್ಯಕ್ತಿಯೊಬ್ಬ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಿದ್ರೆ ಮಾಡುತ್ತಿರುವುದನ್ನ ಸ್ಥಳೀಯ ಆಟೋ ರಿಕ್ಷಾ ಚಾಲಕರೋರ್ವರು ಜುಲೈ 6 ರಂದು ಗಮನಿಸಿದ್ದಾರೆ. ತಕ್ಷಣ ಸ್ಥಳೀಯ ಪೊಲೀಸರಿಗೆ ಆಟೋ ಚಾಲಕ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನ ಬಂಧಿಸಿದ್ದಾರೆ.