ವಿಜಯಸಾಕ್ಷಿ ಸುದ್ದಿ, ರೋಣ : ಮಾಜಿ ಸಚಿವ ಕಳಕಪ್ಪ ಬಂಡಿಯವರು ರೋಣ ನಗರದ ಜನರನ್ನು ಹೀಯಾಳಿಸುವ ಮೂಲಕ ನಗರದ ಜನತೆಯ ಸ್ವಾಭಿಮಾನವನ್ನು ಕೆಣಕಿದ್ದಾರೆ. ಮಾಜಿ ಸಚಿವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಪುರಸಭೆಯ ಉಪಾಧ್ಯಕ್ಷ ಸಂಗನಗೌಡ ಪಾಟೀಲ ಆಗ್ರಹಿಸಿದರು.
ಅವರು ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,
ಮೇ 29ರಂದು ರೋಣ ನಗರದ ಸಂತೆ ಮಾರುಕಟ್ಟೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಕಳಕಪ್ಪ ಬಂಡಿಯವರು ರೋಣ ನಗರದ ಜನತೆ ಕುರಿತು ಅವಹೇಳನಕಾರಿಯಾಗಿ ಮಾತಾಡಿದ್ದು ಸಮಂಜಸವಲ್ಲ. ರೋಣ ನಗರದ ಜನರು ಸ್ವಾಭಿಮಾನಿಗಳಾಗಿದ್ದು, ಕೂಡಲೇ ಮಾಜಿ ಸಚಿವರು ಸಾರ್ವಜನಿಕರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿವರು ಜಿಗಳೂರ ಕೆರೆಯ ಅಭಿವೃದ್ಧಿಯನ್ನು ಕಾಂಗ್ರೆಸ್ನವರು ಬಂದ್ ಮಾಡಿಸಿದ್ದರು ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಈ ಮೊದಲು ಜಿಗಳೂರ ಕೆರೆಯ ನೀರು ಗಜೇಂದ್ರಗಡ, ನರೇಗಲ್ಲ ಪಟ್ಟಣಗಳಿಗೆ ಮಾತ್ರ ಸೀಮಿತವಾಗಿತ್ತು. ಜಿ.ಎಸ್. ಪಾಟೀಲರು ಶಾಸಕರಾಗಿ ಆಯ್ಕೆಯಾದ ಬಳಿಕ ರೋಣ ನಗರವನ್ನು ಯೋಜನೆಯ ವ್ಯಾಪ್ತಿಗೆ ಸೇರ್ಪಡೆ ಮಾಡಿ ಅನುದಾನ ತಂದಿದ್ದರು ಎನ್ನುವುದನ್ನು ಮರೆಯಲು ಸಾದ್ಯವಿಲ್ಲ. ಹೀಗಾಗಿ ಬೊಮ್ಮಾಯಿಯವರು ಸುಳ್ಳು ಹೇಳುವುದನ್ನು ಬಿಡಬೇಕು ಎಂದರು.
ಸಂಗು ನವಲಗುಂದ, ಬಸವರಾಜ ಜಗ್ಗಲ್, ಆನಂದ ಚಂಗಳಿ, ಗದಿಗೆಪ್ಪ ಕಿರೇಸೂರ, ಅಭಿಷೇಕ ನವಲಗುಂದ, ಅಸ್ಲಂ ಕೊಪ್ಪಳ, ಅರ್ಜುನ ಕೊಪ್ಪಳ ಸೇರಿದಂತೆ ಅನೇಕ ಮುಖಂಡರು ಇದ್ದರು.
ರೋಣ ಪಟ್ಟಣದ ಸರಕಾರಿ ಪದವಿ ಮಹಾವಿದ್ಯಾಲಯವನ್ನು ಗುಳೇದಗುಡ್ಡಕ್ಕೆ ಸ್ಥಳಾಂತರಿಸಿದ್ದು ಮತ್ತು ಸರಕಾರಿ ಡಿಪ್ಲೋಮಾ ಕಾಲೇಜನ್ನು ರೋಣ ನಗರದಿಂದ ರಾಮನಗರಕ್ಕೆ ಸ್ಥಳಾಂತರಿಸಿದ್ದು ನೀವೇ ಅಲ್ಲವೇ ಎಂದು ಪ್ರಶ್ನಿಸಿದ ಸಂಗನಗೌಡ ಪಾಟೀಲ, ಕೃಷ್ಣಾ ಬಿ ಸ್ಕೀಂ ಜಾರಿಗೆ ತಂದಿದ್ದು ಸಿದ್ದರಾಮಯ್ಯ ಸರಕಾರ. ಆದರೆ ನೀವು ಅದನ್ನು ಕೆರೆ ತುಂಬಿಸುವ ಯೋಜನೆಯನ್ನಾಗಿ ಬದಲಿಸಿ ಜನತೆಗೆ ಮೋಸ ಮಾಡಿದ್ದೀರಿ. ಜಿ.ಎಸ್. ಪಾಟೀಲರು ಅಭಿವೃದ್ಧಿಪರ ನಾಯಕರು ಎನ್ನುವುದನ್ನು ಕ್ಷೇತ್ರದ ಜನರು ಒಪ್ಪಿಕೊಂಡಿದ್ದಾರೆ ಎಂದು ಸಂಗನಗೌಡ ಪಾಟೀಲ ಹೇಳಿದರು.



