ವಿಜಯಸಾಕ್ಷಿ ಸುದ್ದಿ, ರೋಣ : ಕಾಂಗ್ರೆಸ್ನಿಂದ ಮಾತ್ರ ದೇಶದ ಪ್ರಗತಿ ಎನ್ನುವುದನ್ನು ಮತದಾರರು ಮರೆಯಬಾರದು ಎಂದು ಮಾಜಿ ಸಚಿವ ಬಿ.ಆರ್ ಯಾವಗಲ್ಲ ಹೇಳಿದರು.
ಅವರು ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ಬಾಗಲಕೊಟಿ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಪರವಾಗಿ ಮತಯಾಚಿಸಿ ಮಾತನಾಡಿದರು.
ರಾಜಕೀಯ ಪಕ್ಷಗಳಾಗಲಿ, ನಾಯಕರಾಗಲಿ ಜನರಲ್ಲಿ ಸಹೋದರತೆಯನ್ನು ಮೂಡಿಸಬೇಕೇ ಹೊರತು ದ್ವೇಷವನ್ನಲ್ಲ. ಇವತ್ತಿನ ದಿನಗಳಲ್ಲಿ ದ್ವೇಷ ಮನೋಭಾವನೆಯನ್ನು ಬಿತ್ತುವುದೇ ಉದ್ದೇಶವಾಗಿರುವುದು ವಿಪರ್ಯಾಸ. ಇದರಿಂದ ದೇಶದ ಪ್ರಗತಿ ಅಸಾಧ್ಯ. ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಯುವ ಮುಖಂಡ ವಿವೇಕ ಯಾವಗಲ್ಲ ಮಾತನಾಡಿ, ರಾಜ್ಯದ ಜನತೆಯ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಜನರಿಗೆ ತಲುಪಿಸಿದೆ. ಈಗ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಗೆ 1 ಲಕ್ಷ ಸೇರಿದಂತೆ ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದು, ಮತದಾರರು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲರನ್ನು ಗೆಲ್ಲಿಸುವ ಮೂಲಕ ಯೋಜನೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.