ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಕರು ಕೇವಲ ಪಾಠ ಬೋಧನೆಗೆ ಸೀಮಿತರಲ್ಲ. ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ, ವ್ಯಕ್ತಿತ್ವ ವಿಕಸನ, ಚಿಂತನಶೀಲತೆ ಹಾಗೂ ಜೀವನ ಮೌಲ್ಯಗಳನ್ನು ರೂಪಿಸುವ ಮೂಲಕ ಆಧುನಿಕ ಸಮಾಜದ ನಿರ್ಮಾತರಾಗಿದ್ದಾರೆ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಹೇಳಿದರು.
ನಗರದ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಶನಿವಾರ ತೋಂಟದಾರ್ಯ ಮಠದ ಅನುಭವ ಮಂಟಪದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ‘ಶಿಕ್ಷಕರು ಆಧುನಿಕ ಸಮಾಜದ ನಿರ್ಮಾತರು’ ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಉತ್ತಮ ಶಿಕ್ಷಕರು ಪ್ರಭಾವ ಬೀರುವ ಶಕ್ತಿಗಳಾಗಿದ್ದು, ಅವರ ಪ್ರಭಾವ ಒಬ್ಬ ವಿದ್ಯಾರ್ಥಿಯ ಜೀವನಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಶಿಕ್ಷಕರಿಂದ ಜ್ಞಾನ ಪಡೆದ ಮಕ್ಕಳು ಮುಂದೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಾರೆ. ಹೀಗಾಗಿ ಶಿಕ್ಷಕರು ರಾಷ್ಟ್ರದ ಉಜ್ವಲ ಭವಿಷ್ಯಕ್ಕೆ ಮಕ್ಕಳನ್ನು ಸಿದ್ಧಪಡಿಸುವ ಶಕ್ತಿಯಾಗಿದ್ದಾರೆ ಎಂದರು.
ಮೈಸೂರಿನ ವಿವೇಕಾನಂದ ಯೋಗ ಎಜುಕೇಷನ್ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ನಿಂದ ‘ರಾಜಯೋಗಿ ಟಿ. ಕೃಷ್ಣಮಾಚಾರ್ಯ ಪ್ರಶಸ್ತಿ-೨೦೨೬’ ಪಡೆದ ಗದಗದ ಯೋಗಾಚಾರ್ಯ ಕೆ.ಎಸ್. ಪಲ್ಲೇದ ಮಾತನಾಡಿ, ಉತ್ತಮ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಮೂಲಕ ಸಮಾಜ ನಿರ್ಮಾಣದ ಕೈಂಕರ್ಯಕ್ಕೆ ಅಣಿಯಾಗುತ್ತಾರೆ. ವಿದ್ಯಾರ್ಥಿಗಳನ್ನು ಮೌಲ್ಯಯುತ ನಾಗರಿಕರನ್ನಾಗಿ ರೂಪಿಸಿದಾಗ ಉತ್ತಮ ನಾಗರಿಕರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಶಿಕ್ಷಕರು ಸಮಾಜದ ಮಾರ್ಗದರ್ಶಕರಾಗಿ ಜ್ಞಾನ ದೀವಿಗೆ ಬೆಳಗಿಸುವ ನಿರಂತರ ಜ್ಯೋತಿಗಳಾಗಿದ್ದಾರೆ ಎಂದರು.
ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಗದಗ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಶ್ರೀಮತಿ ಭಾರತಿ ಕುಲಕರ್ಣಿ, ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ, ಯೋಗಾಚಾರ್ಯ ಕೆ.ಎಸ್. ಪಲ್ಲೇದ ಹಾಗೂ ಯೋಗ ಶಿಕ್ಷಕರಾದ ಸುನಂದಾ ಜಾನೋಪಂತರ, ಜಯಶ್ರೀ ಡಾವಣಗೆರೆ, ಲಕ್ಷ್ಮೀ ನಿಡವಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರು ಕೃತಜ್ಞತೆ ವ್ಯಕ್ತಪಡಿಸಿ ಮಾತನಾಡಿದರು.
ಅರುಣಾ ಹಳಕಟ್ಟಿ ವಚನ ಪ್ರಾರ್ಥನೆ ನೆರವೇರಿಸಿದರು. ಶಾರದಾ ಬೊಮ್ಮಸಾಗರ ನಿರೂಪಿಸಿದರು. ರೇಣುಕಾ ಅಮಾತ್ಯ ಹಾಗೂ ಶಶಿಕಲಾ ಮಾಲೀಪಾಟೀಲ ಪರಿಚಯಿಸಿದರು. ಸುಗ್ಗಲಾ ಯಳಮಲಿ ಕಾರ್ಯಕ್ರಮ ನಿರ್ವಹಿಸಿದರು. ಪುಷ್ಪಾ ಬಂಡಾರಿ ವಂದಿಸಿದರು.
ಗೌರವಾಧ್ಯಕ್ಷರಾದ ನಿರ್ಮಲಾ ಪಾಟೀಲ, ಅಕ್ಕಮಹಾದೇವಿ ಚಟ್ಟಿ, ಸದಸ್ಯರಾದ ಶೀಲಾ ಗೋಟಡಕಿ, ಶಾರದಾ ಸಜ್ಜನರ, ಜಯಶ್ರೀ ಹುಬ್ಬಳ್ಳಿ, ಅಕ್ಕಮ್ಮ ವಸ್ತ್ರದ, ಶಕುಂತಲಾ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.



