ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಭಾರತೀಯ ಸಂಸ್ಕೃತಿಯಲ್ಲಿ ಧರ್ಮ, ದೇವಸ್ಥಾನಗಳು, ದೇವರು, ಸಂಸ್ಕೃತಿಯ ಬಗ್ಗೆ ಅಪಾರವಾದ ಶಕ್ತಿ, ನಂಬಿಕೆ, ಶೃದ್ಧೆ, ಗೌರವವಿದೆ. ಈ ಸತ್ ಸಂಪ್ರದಾಯ-ಪರಂಪರೆಯ ಶ್ರೀಮಂತಿಕೆಯನ್ನು ಹೆಚ್ಚಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಸಮೀಪದ ಅಡರಕಟ್ಟಿ ಗ್ರಾಮದ ಶ್ರೀ ಬೂದಿವಂತ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ದೇವಸ್ಥಾನಗಳು ಆಯಾ ಭಾಗದ ಇತಿಹಾಸ, ಸಂಸ್ಕೃತಿಗಳನ್ನು ಪ್ರತಿಬಿಂಬಿಸುತ್ತವೆ. ಅದಕ್ಕಾಗಿ ದೇವಸ್ಥಾನಗಳ ರಕ್ಷಣೆಯಾಗಬೇಕು. ಅತ್ಯಂತ ಪವಿತ್ರ, ಜಾಗೃತ, ಇಷ್ಟಾರ್ಥ ಸಿದ್ಧಿಸುವ ಈ ಬಸವೇಶ್ವರ ದೇವಸ್ಥಾನಕ್ಕೆ ನಾನು ಪ್ರತಿ ವರ್ಷ ಬಂದು ಹೋಗುತ್ತಿದ್ದೆ. ಕಾರಣಾಂತರಗಿಂದ ಸ್ಥಗಿತಗೊಂಡಿದ್ದ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸುವ ಭರವಸೆ ನೀಡಿದ್ದೇನೆ. ಅಧಿಕಾರ ಶಾಶ್ವತವಲ್ಲ, ನಾವು ಮಾಡುವ ಕಾರ್ಯಗಳು ಶಾಶ್ವತವಾಗಿರುತ್ತವೆ ಎಂದರು.
ಮಳೆಯ ಕಾರಣದಿಂದ ಬೆಳೆಹಾನಿ ಬಗ್ಗೆ ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸಲು ಪಕ್ಷದ ಪ್ರಮುಖರ ತಂಡ ರಚಿಸಲಾಗಿದೆ. ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡುವ ಮೂಲಕ ರೈತರಿಗೆ ಪರಿಹಾರ ನೀಡುವಂತೆ ಮನವಿ ಮಾಡುವದಾಗಿ ಹೇಳಿದರು.
ದೇವಸ್ಥಾನದ ಅರ್ಚಕರಾದ ಶ್ರೀಶೈಲ ಮಹಾಸ್ವಾಮಿಗಳು ಮಾತನಾಡಿ, ಶ್ರೀರಾಮುಲು ಅವರ ಇಚ್ಛೆಯಂತೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ದೇವರ ಇಚ್ಛೆಯಂತೆ ಶ್ರೀರಾಮುಲು ಅವರು ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ನುಡಿದರು.
ಮಾಜಿ ಶಾಸಕ ರಾಮಣ್ಣ ಲಮಾಣಿ, ಮುಖಂಡರಾದ ನಾಗರಾಜ ಕುಲಕರ್ಣಿ, ಮಂಡಳ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿವಪುತ್ರಯ್ಯ ಹಿರೇಮಠ, ರಾಮಣ್ಣ ಚಿಕ್ಕಣ್ಣವರ, ವಿಜಯ ಹತ್ತಿಕಾಳ, ನಿಂಗಪ್ಪ ಬನ್ನಿ, ನಿಂಗಪ್ಪ ಪ್ಯಾಟಿ, ಅನಿಲ ಮುಳಗುಂದ, ಮುದಿಯಪ್ಪ ಹವಳದ, ನಾಗರಾಜ ಸೊನ್ನ, ಪ್ರಕಾಶ ಬೆಂತೂರ, ಭೀಮಣ್ಣ ಯಂಗಾಡಿ, ಹನುಮಂತ ಜಾಲಿಮರದ ಮುಂತಾದವರಿದ್ದರು.