ವಿಜಯಸಾಕ್ಷಿ ಸುದ್ದಿ, ಡಂಬಳ: ಮನುಷ್ಯ ಜೀವನದಲ್ಲಿ ಏನನ್ನಾದರೂ ಉನ್ನತವಾಗಿ ಸಾಧಿಸಬೇಕಾದರೆ ಶಿಕ್ಷಣದ ಪಾತ್ರ ಮುಖ್ಯವಾಗಿದೆ. ವಿದ್ಯಾರ್ಥಿ ಜೀವನದ ಬೆಳವಣಿಗೆಗೆ ಪಂಚೇಂದ್ರಿಯಗಳ ನಿಗ್ರಹ ಅವಶ್ಯಕ ಎಂದು ಜೆ.ಟಿ. ಸಂಸ್ಥಾನ ವ್ಮಠದ ವ್ಯವಸ್ಥಾಪಕರಾದ ವಿ.ಜಿ. ಹಿರೇಮಠ ಹೇಳಿದರು.
ಡಂಬಳ ಗ್ರಾಮದಲ್ಲಿ ಗದಗ ನಗರದ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಕ ಅಶೋಕ ಮಾನೆ ಮಾತನಾಡಿ, ಇಂತಹ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನ, ಪರಿಸರ ರಕ್ಷಣೆ, ನಾಡು-ನುಡಿಯ ಸಂಸ್ಕೃತಿಯ ಉಳಿವು ಹಾಗೂ ತಂದೆ-ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ ಬೆಳವಣಿಗೆ ಹೊಂದವರು ಎಂದು ಶಿಬಿರದ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ನಾಗರಾಜ್ ಓಬಯ್ಯ ಮಾತನಾಡಿ, ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಹೆಚ್ಚಿಸುವುದರ ಜೊತೆಗೆ ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸುತ್ತವೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತಾವೆಲ್ಲರೂ ಈ ದೇಶಕ್ಕಾಗಿ ಪ್ರಾಮಾಣಿಕ ಸೇವೆಯನ್ನು ಅರ್ಪಿಸಬೇಕು ಎಂದು ಹೇಳಿದರು.
ರಾಷ್ಟ್ರ್ರೀಯ ಸೇವಾ ಯೋಜನಾಧಿಕಾರಿ ಪ್ರೊ. ಜಗನ್ನಾಥ್ ಆರ್ ಶಿಬಿರದ ವರದಿ ವಾಚಿಸಿ, ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಹೇಳಿದರು. ಡಾ. ಕುಮಾರ್ ಎಚ್.ಕೆ. ಸ್ವಾಗತಿಸಿದರು. ಶ್ರದ್ಧಾ ಹಾಗೂ ಅನುಷಾ ಪುಷ್ಪಾರ್ಚನೆಗೈದರು. ಅನ್ನಪೂರ್ಣ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜೆ.ಟಿ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.