ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣದ ವ್ಯವಸ್ಥೆಯನ್ನು ಹಾಳುಗೆಡವಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಶಾಹಪುರ ಆರೋಪಿಸಿದರು.
ಪಟ್ಟಣದ ಎಡಿಬಿ ಕಾಲೇಜಿನಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರವಾಗಿ ಮತಯಾಚನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ವ್ಯವಸ್ಥೆ ಹೀನಾಯ ಹಂತಕ್ಕೆ ತಲುಪಿದೆ. ಶಿಕ್ಷಣ ಇಲಾಖೆಗೆ ಪರೀಕ್ಷೆಯ ಬಗ್ಗೆ ಸ್ಪಷ್ಟ ಪರಿಕಲ್ಪನೆ ಇಲ್ಲ. ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಅನಗತ್ಯವಾಗಿ ಗೊಂದಲಕ್ಕೆ ತಳ್ಳಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
10ನೇ ತರಗತಿ ಮತ್ತು ದ್ವಿತೀಯ ಪಿಯುಸಿಗೆ ತಲಾ ಮೂರು ಪರೀಕ್ಷೆಗಳನ್ನು ನಡೆಸುತ್ತದೆ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ತೀವ್ರ ಒತ್ತಡಕ್ಕೆ ಸಿಲುಲುಕಿದ್ದು, ಮೂರು ಪರೀಕ್ಷೆಗಳಿಗೂ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ವಸೂಲಿ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಕ್ರಪಾಂಕ (ಗ್ರೇಸ್ ಮಾರ್ಕ್ಸ್) ನೀಡುವ ಮೂಲಕ ರಾಜಕೀಯ ಹಸ್ತಕ್ಷೇಪ ಮಾಡಿದ್ದಾರೆ ಎಂದು ದೂರಿದರು.
ಹಿಂದಿನ ಬಿಜೆಪಿ ಸರ್ಕಾರ ಶಿಕ್ಷಣದ ವ್ಯವಸ್ಥೆ ಸುಧಾರಣೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಒಂದೇ ಒಂದು ಶಾಲಾ ಕೊಠಡಿ ಭೂಮಿ ಪೂಜೆ ನಡೆದಿಲ್ಲ, ಶಿಕ್ಷಕರ ನೇಮಕವಿಲ್ಲ, ಸರ್ಕಾರ ಶಿಕ್ಷಣದ ವ್ಯವಸ್ಥೆಯನ್ನು ದುರಾಡಳಿತಕ್ಕೆ ತಳ್ಳಿದೆ ಎಂದು ವಾಗ್ದಾಳಿ ನಡೆಸಿ, ಪದವೀಧರರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲರಿಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.
ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಎಂ.ಪಿ. ನಾಯ್ಕ, ಆರುಂಡಿ ನಾಗರಾಜ, ಕಣಿವಿಹಳ್ಳಿ ಮಂಜುನಾಥ, ಮುದುಕವ್ವನವರ ಶಂಕರ, ಎಲ್. ಮಂಜ್ಯಾನಾಯ್ಕ, ಬಿ.ವೈ. ವೆಂಕಟೇಶ ನಾಯ್ಕ, ಓಂಕಾರ ಗೌಡ, ಚನ್ನನಗೌಡ, ಲಿಂಗಾನಂದ, ಕುಸುಮ ಜಗದೀಶ್, ಸಪ್ನ ಮಲ್ಲಿಕಾರ್ಜುನ, ರಮೇಶ ಎಂ. ಚಂದ್ರಶೇಖರ ಮುಂತಾದವರಿದ್ದರು.