ವಿಜಯಸಾಕ್ಷಿ ಸುದ್ದಿ, ಗದಗ: ನೀತಿಯೇ ಇಲ್ಲದ ಇಂದಿನ ರಾಜಕಾರಣದಲ್ಲಿ ರೈತರ ಬೇಕು-ಬೇಡಿಕೆಗಳನ್ನು ಒಳಗೊಂಡ ಹೊಸ ಪ್ರಣಾಳಿಕೆಯನ್ನು ಇದೇ ಜ. 20ರಂದು ಬೆಂಗಳೂರಿನಲ್ಲಿ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖ ಬಣ) ಮುಖಂಡ ಶಂಕರಗೌಡ ಜಾಯನಗೌಡ್ರ ಹೇಳಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಎಲ್ಲೆ ಇಲ್ಲದಂತಾಗಿದೆ. ನದಿ ವಿವಾದ, ಗಡಿ ವಿವಾದಗಳು ಇತ್ಯರ್ಥವಾಗುತ್ತಿಲ್ಲ. ರೈತರ ಬೆಳೆದ ಬೆಳೆಗೆ ವೈಜ್ಞಾಕ ಬೆಲೆ ಸಿಗುತ್ತಿಲ್ಲ. ನೀರಾವರಿ, ಶಿಕ್ಷಣ ಕ್ಷೇತ್ರಗಳಲ್ಲಿ ಜ್ವಲಂತ ಸಮಸ್ಯೆಗಳಿವೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳಲ್ಲಿ ತೀರಾ ಹಿಂದುಳಿದೆ. ರಾಜಕಾರಣದಲ್ಲಿ ನೀತಿ ಇಲ್ಲದಾಗಿದೆ. ಇದಕ್ಕೆ ಹೊಸ ರೂಪ ಕೊಡಬೇಕು ಎನ್ನುವ ಉದ್ದೇಶದಿಂದ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಕರ್ನಾಟಕದ ಹೊಸ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಜ. 20ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದರು.
ರೈತ ಮತ್ತು ನಾಡಿನ ಪರವಾದ ಹೊಸ ಪ್ರಣಾಳಿಕೆ ಬಿಡುಗಡೆಗೆ ಕನ್ನಡ ಮತ್ತು ರೈತಪರ ಸಂಘಟನೆಗಳು ಕೈ ಜೋಡಿಸಿವೆ. ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಬಿ.ಟಿ. ಲಲಿತಾ ನಾಯಕ, ನಾರಾಯಣಗೌಡ್ರ ಸಹಿತ ಅನೇಕ ಗಣ್ಯರು ಅಂದು ರೈತರ ಜೊತೆಗಿದ್ದು, ಹೊಸ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಗದಗ ಜಿಲ್ಲೆಯ ನೀರಾವರಿ, ಹೆದ್ದಾರಿ, ರೈಲ್ವೆ ಸಹಿತ ಅನೇಕ ಜ್ವಲಂತ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಸರಕಾರ ನಮ್ಮ ಪ್ರಣಾಳಿಕೆಗೆ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಹೋರಾಟ ನಡೆಸುವ ಚಿಂತನೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸವರಾಜ ನವಲಗುಂದ, ಶಿವಯೋಗಯ್ಯ ಶಶಿಮಠ, ಮಂಜುನಾಥ ವಡ್ಡರ್, ಅರುಣಕುಮಾರ ತಿರ್ಲಾಪುರ, ಎಚ್.ಡಿ. ದೊಡ್ಡಮನಿ, ಸಂತೋಷ ಹೂಗಾರ ಇತರರು ಉಪಸ್ಥಿತರಿದ್ದರು.