ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ನಿರೂಪಣೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಟೀಕೆಗಳ ಬಗ್ಗೆ ಕಿಚ್ಚ ಸುದೀಪ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಪ್ರತೀ ವೀಕೆಂಡ್ ಬಿಗ್ ಬಾಸ್ ನೋಡುವ ದೊಡ್ಡ ವೀಕ್ಷಕ ವರ್ಗವಿದ್ದು, ಸುದೀಪ್ ಅವರಿಗಾಗಿ ಮಾತ್ರ ಶೋ ನೋಡುವವರೂ ಇದ್ದಾರೆ.
‘ಇಡೀ ಕರ್ನಾಟಕ ಬಿಗ್ ಬಾಸ್ ನೋಡುತ್ತದೆ. ನಾನು ವೇದಿಕೆಯಲ್ಲಿ ನಿಂತು ಎಲ್ಲರ ಜೀವನವನ್ನು ಕೈಯಲ್ಲಿ ಇಟ್ಟುಕೊಂಡಿರುತ್ತೇನೆ. ನನಗೆ ಯಾರೂ ಏನೂ ಹೇಳಿಕೊಡುವುದಿಲ್ಲ. ಸ್ಪರ್ಧಿಗಳಿಗೂ ನನಗೂ ಲೈವ್ ನಡೆಯುತ್ತಿರುತ್ತದೆ. ಅವರು ಕೇಳಿದ್ದಕ್ಕೆ ತಕ್ಷಣ ಸ್ಪಂದಿಸಬೇಕಾಗುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.
ಕೆಲವೊಮ್ಮೆ ಸ್ಪರ್ಧಿಗಳನ್ನು ಗಟ್ಟಿಯಾಗಿ ಮಾತನಾಡಿಸಬೇಕಾಗುತ್ತದೆ ಎಂದು ತಿಳಿಸಿದ ಅವರು, ‘ಇವತ್ತು ಬೈಯದೇ ಇದ್ದರೆ ಅವರು ಹಾಳಾಗಿ ಹೋಗುತ್ತಾರೆ. ಇನ್ನು ಕೆಲವರಿಗೆ ಬೈಯ್ಯುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಅವರು ಅಲ್ಲಿಯವರೆಗೆ ಬರುವುದೇ ಇಲ್ಲ’ ಎಂದರು.
ಪಕ್ಷಪಾತದ ಆರೋಪಗಳ ಕುರಿತು ಮಾತನಾಡಿದ ಸುದೀಪ್, ‘ನಾನು ಯಾಕೆ ಪಕ್ಷಪಾತ ಮಾಡಬೇಕು? ನಾನು ಯಾಕೆ ಹೆದರಿಕೊಳ್ಳಬೇಕು? ಎಂಥೆಂಥವರನ್ನೂ ಪಳಗಿಸಿಕೊಂಡು ಬಂದವನು ನಾನು. ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುವುದು ಅವರವರ ಅಭಿಪ್ರಾಯ. ಅಷ್ಟು ಪೇಜ್ ಓಪನ್ ಆಗಿದೆ ಅಂದರೆ ಬಿಗ್ ಬಾಸ್ ಬಗ್ಗೆ ಅವರಿಗೆ ಪ್ರೀತಿ ಇದೆ’ ಎಂದು ಹೇಳಿದರು.
‘ಪ್ರತಿ ಕ್ಷಣವನ್ನು ಜನ ನೋಡುತ್ತಾರೆ. 14 ಟಿವಿಆರ್ ಸುಮ್ಮನೆ ಬರುವುದಿಲ್ಲ. ಇಷ್ಟು ದಿನ ನಾನು ಒಬ್ಬನೇ ಆ್ಯಂಕರ್ ಆಗಿದ್ದೆ. ಈಗ ತುಂಬಾ ಜನ ಆ್ಯಂಕರ್ ಆಗಿದ್ದಾರೆ. ವೇದಿಕೆ ಮೇಲೆ ಮಾತ್ರ ನಾನು ಒಬ್ಬನೇ. ಒಬ್ಬ ವೀಕ್ಷಕ ನಮಗೆ ಮುಖ್ಯ ಅಂದರೆ, ಅವರು ಪ್ರತಿಕ್ರಿಯಿಸುವ ರೀತಿಯನ್ನೂ ನಾವು ಒಪ್ಪಿಕೊಳ್ಳಬೇಕು. ಅದನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬಾರದು’ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.



