HomeKarnataka NewsRTI ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಅವಕಾಶವಿಲ್ಲ: BDA ಕಾರ್ಯದರ್ಶಿಗೆ ವಿಧಿಸಿದ್ದ ₹25 ಸಾವಿರ ದಂಡ ಎತ್ತಿಹಿಡಿದ ಹೈಕೋರ್ಟ್

RTI ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಅವಕಾಶವಿಲ್ಲ: BDA ಕಾರ್ಯದರ್ಶಿಗೆ ವಿಧಿಸಿದ್ದ ₹25 ಸಾವಿರ ದಂಡ ಎತ್ತಿಹಿಡಿದ ಹೈಕೋರ್ಟ್

For Dai;y Updates Join Our whatsapp Group

Spread the love

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಮೊದಲ ಮೇಲ್ಮನವಿ ಪ್ರಾಧಿಕಾರದ ಹುದ್ದೆ ಕೇವಲ ಆಡಳಿತಾತ್ಮಕ ಹುದ್ದೆಯಲ್ಲ, ಅದು ಶಾಸನಬದ್ಧ ಅಧಿಕಾರ ಹೊಂದಿರುವ ಜವಾಬ್ದಾರಿಯುತ ಸ್ಥಾನವಾಗಿದೆ ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಹೊಸದಾಗಿ ಅಧಿಕಾರ ವಹಿಸಿಕೊಳ್ಳುವ ಅಧಿಕಾರಿಗಳಿಗೆ ಹಿಂದಿನಿಂದ ಬಾಕಿ ಉಳಿದಿರುವ ಕರ್ತವ್ಯಗಳ ಜವಾಬ್ದಾರಿಯೂ ಅನ್ವಯವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಈ ಹಿಂದೆ ಆ ಹುದ್ದೆಯಲ್ಲಿದ್ದ ಅಧಿಕಾರಿಗಳ ನಿರ್ಲಕ್ಷ್ಯವನ್ನು ಕಾರಣವನ್ನಾಗಿ ಮಾಡಿ ಹಾಲಿ ಅಧಿಕಾರಿ ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ರಾಜ್ಯ ಮಾಹಿತಿ ಆಯೋಗವು ವಿಧಿಸಿದ್ದ ₹25 ಸಾವಿರ ದಂಡವನ್ನು ಪ್ರಶ್ನಿಸಿ ಬಿಡಿಎ ಕಾರ್ಯದರ್ಶಿ ಸಿ.ಎಲ್. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ಬಳಿಕ ಮಾಹಿತಿ ಆಯೋಗದ ದಂಡದ ಆದೇಶವನ್ನು ಎತ್ತಿಹಿಡಿದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ.

ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಅಧಿಕಾರಿಗಳು ವರ್ಗಾವಣೆಯ ನೆಪವೊಡ್ಡಿ ಶಾಸನಬದ್ಧ ಕರ್ತವ್ಯಗಳನ್ನು ಮುಂದೂಡುತ್ತಾ ಹೋದರೆ ಆಡಳಿತದಲ್ಲಿ ವಿಳಂಬ ಹಾಗೂ ಅಸ್ತವ್ಯಸ್ತತೆ ಉಂಟಾಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹಿಂದಿನ ಅಧಿಕಾರಿಗಳ ಅವಧಿಯಲ್ಲಿ ಆರಂಭವಾದ ಪ್ರಕರಣಗಳನ್ನು ಹೊಸದಾಗಿ ಅಧಿಕಾರ ವಹಿಸಿಕೊಂಡ ಸಾರ್ವಜನಿಕ ಅಧಿಕಾರಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಂತಹ ನಡೆ ಮಾಹಿತಿ ಹಕ್ಕು ಕಾಯ್ದೆಯ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆ ಎಂದು ಪೀಠ ತಿಳಿಸಿದೆ.

ಅಧಿಕಾರ ವಹಿಸಿಕೊಂಡ ಬಳಿಕ ಅರ್ಜಿದಾರರು ತಮ್ಮ ಕರ್ತವ್ಯಗಳ ಬಗ್ಗೆ ಜಾಗರೂಕರಾಗಿದ್ದರೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು. ಕನಿಷ್ಠ ಮಾಹಿತಿ ಆಯೋಗದಿಂದ ನೋಟಿಸ್ ಬಂದ ಬಳಿಕವಾದರೂ ಅಧೀನ ಅಧಿಕಾರಿಗಳಿಗೆ ಮಾಹಿತಿ ಒದಗಿಸುವಂತೆ ನಿರ್ದೇಶನ ನೀಡಬಹುದಾಗಿತ್ತು. ಆದರೆ ದಂಡ ವಿಧಿಸಿದ ಎರಡು ತಿಂಗಳ ಬಳಿಕ ಮಾತ್ರ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.

ಇದಲ್ಲದೆ, ಮಾಹಿತಿ ಆಯೋಗದ ಮುಂದೆ ಮೂರು ಬಾರಿ ವಿಚಾರಣೆ ನಡೆದರೂ ಬಿಡಿಎ ಪರವಾಗಿ ಯಾರೂ ಹಾಜರಾಗದಿರುವುದು ಗಂಭೀರ ಕರ್ತವ್ಯ ಲೋಪವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದು ಕೇವಲ ಹಿಂದಿನ ಅಧಿಕಾರಿಗಳ ತಪ್ಪು ಮಾತ್ರವಲ್ಲ, ಹಾಲಿ ಅಧಿಕಾರಿಯ ಅವಧಿಯಲ್ಲಿಯೂ ಮುಂದುವರಿದ ನಿರ್ಲಕ್ಷ್ಯದ ಪರಿಣಾಮವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ದಂಡ ವಿಧಿಸಿದ ಬಳಿಕ, 2026ರ ಮಾರ್ಚ್ ತಿಂಗಳಲ್ಲಿ ಮಾಹಿತಿ ಒದಗಿಸುವಂತೆ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನು ಉಲ್ಲೇಖಿಸಿದ ನ್ಯಾಯಪೀಠ, ಕಾನೂನು ಕ್ರಮ ಜರುಗಿದ ನಂತರ ಎಚ್ಚೆತ್ತುಕೊಳ್ಳುವ ಇಂತಹ ನಡೆಗಳನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಅಧಿಕಾರಿಗಳ ನಿಷ್ಕ್ರಿಯತೆಯಿಂದ ಮಾಹಿತಿ ಮರೆಮಾಚುವಂತಾಗಬಾರದು. ಹೀಗಾಗಿ ಮಾಹಿತಿ ಆಯೋಗದ ಆದೇಶದಲ್ಲಿ ಯಾವುದೇ ಕಾನೂನು ದೋಷ ಕಂಡುಬರುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

ಇದೇ ವೇಳೆ, 2025ರ ಮೇ ತಿಂಗಳಿಗೂ ಮುನ್ನ ಮಾಹಿತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸಿ, ಅಗತ್ಯವಿದ್ದರೆ ಕಾನೂನು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ

ಎ. ಸುರೇಶ್ ಚಂದ್ರ ಬಾಬು ಅವರು 2023ರ ಫೆಬ್ರವರಿ 6ರಂದು ಕೆಲವು ಮಾಹಿತಿಗಳನ್ನು ಕೋರಿ ಬಿಡಿಎಗೆ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ನಿಗದಿತ ಅವಧಿಯಲ್ಲಿ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಅವರು 2023ರ ಮಾರ್ಚ್‌ನಲ್ಲಿ ಮೊದಲ ಮೇಲ್ಮನವಿ ಸಲ್ಲಿಸಿದ್ದರು. ಇದಕ್ಕೂ ಸ್ಪಂದನೆ ದೊರೆಯದ ಕಾರಣ ರಾಜ್ಯ ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿ ಸಲ್ಲಿಸಿದ್ದರು.

ಈ ನಡುವೆ 2025ರ ಮೇ 8ರಂದು ಸಿ.ಎಲ್. ಶಿವಕುಮಾರ್ ಅವರು ಬಿಡಿಎ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿ ಮೊದಲ ಮೇಲ್ಮನವಿ ಪ್ರಾಧಿಕಾರವಾಗಿಯೂ ನೇಮಕಗೊಂಡಿದ್ದರು.

ಸುರೇಶ್ ಚಂದ್ರ ಬಾಬು ಸಲ್ಲಿಸಿದ್ದ ಎರಡನೇ ಮೇಲ್ಮನವಿಯ ವಿಚಾರಣೆಯನ್ನು ಮಾಹಿತಿ ಆಯೋಗವು 2025ರ ಜುಲೈ, ಆಗಸ್ಟ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಸಿದರೂ ಬಿಡಿಎ ಪರವಾಗಿ ಯಾರೂ ಹಾಜರಾಗಿರಲಿಲ್ಲ. ಇದರಿಂದಾಗಿ ಆಯೋಗವು 2026ರ ಜನವರಿ 1ರಂದು ಬಿಡಿಎ ಕಾರ್ಯದರ್ಶಿಗೆ ₹25 ಸಾವಿರ ದಂಡ ವಿಧಿಸಿ ಮಾಹಿತಿ ನೀಡುವಂತೆ ಆದೇಶಿಸಿತ್ತು. ಬಳಿಕ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹಿಂದಿನ ಅಧಿಕಾರಿಗಳ ಅವಧಿಯಲ್ಲಿ ನಡೆದ ಲೋಪಗಳಿಗೆ ತಾವು ಜವಾಬ್ದಾರರಲ್ಲ ಎಂಬ ವಾದವನ್ನು ನ್ಯಾಯಾಲಯ ತಿರಸ್ಕರಿಸಿ, ಮಾಹಿತಿ ಆಯೋಗದ ಕ್ರಮವನ್ನು ಎತ್ತಿಹಿಡಿದಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!