ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳಲ್ಲಿ ಅಗಾಧವಾದ ಶಕ್ತಿಯಿದೆ. ಅದನ್ನು ಹೊರಹಾಕಲು ಪೂರಕ ವಾತಾವರಣ ಕಲ್ಪಿಸಬೇಕು ಎಂದು ಧಾರವಾಡದ ವೈದ್ಯಾಧಿಕಾರಿ ಡಾ. ರಾಜಶೇಖರ ಬಸೆಟ್ಟಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಗವಿಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ನಡೆದ ಪ್ರವಚನ ಕಾರ್ಯಕ್ರಮದ ಮಂಗಲೋತ್ಸವ, ಬಾಲಲೀಲಾ ಮಹಾಂತ ಶಿವಯೋಗಿಗಳ 201ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಒಳ್ಳೆಯ ವಿಚಾರಗಳನ್ನು ಅನುಕರಣೆ ಮಾಡಬೇಕು. ಜಾನಪದ ಕಲೆ ನಮ್ಮ ಸಂಸ್ಕೃತಿಯನ್ನು ತಿಳಿಸುತ್ತದೆ. ಉತ್ತಮ ಆಚಾರ-ವಿಚಾರಗಳನ್ನು ಅನಷ್ಠಾನಗೊಳಿಸಬೇಕು. ಶಿವಯೋಗಿಗಳು ನಡೆದಾಡಿದ ಪಾವನ ತಾಣವಿದು. ಇಲ್ಲಿ ಅದ್ಭುತ ಶಕ್ತಿಯಿದೆ ಎಂದರು.
ಯರನಾಳದ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿ ಜಾತಿಯ ಕ್ರಾಂತಿ ಎಬ್ಬಿಸಿದ ನಾಡಿದು. ಇಲ್ಲಿ ಮಠಾಧೀಶರು ಮಠಕ್ಕೆ ಸೀಮಿತವಾಗಿರದೇ ಸಮಾಜಕ್ಕೆ ಸೀಮಿತವಾಗಿದ್ದು, ಜನರಿಗೆ ಮಾದರಿಯಾಗಿರಬೇಕು. ಶಿವಜ್ಞಾನವನ್ನು ಮಾಡುವದರಿಂದ ಜನ್ಮ ಜನ್ಮದ ಪಾಪಗಳು ಪರಿಹಾರವಾಗುತ್ತವೆ. ಹೆಚ್ಚಾಗಿ ಈ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನಗಳು ನಡೆಯುತ್ತವೆ. ಅದನ್ನು ಕೇಳಿ ಅದರಂತೆ ನಡೆಯಬೇಕು ಎಂದರು.
ಧಾರವಾಡ ಮುರುಘಾಮಠ ಹಾಗೂ ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಪ್ರವಚನಕಾರ ಪಂಚಾಕ್ಷರಯ್ಯ ಮರಿದೇವರಮಠ, ಎಂ.ಡಿ. ಬಟ್ಟೂರ, ಡಾ. ಎಸ್.ಸಿ. ಚವಡಿ, ಗೌರಮ್ಮ ಬಡ್ನಿ, ಶಿವಾಜಿ ಬಳಗಾನೂರ, ಪರಮೇಶ್ವರಪ್ಪ ಈ.ಕಣವಿ ಮುಂತಾದವರು ಇದ್ದರು.