World Water Day: ಇಂದು ವಿಶ್ವ ಜಲ ದಿನ: ಇತಿಹಾಸ, ಮಹತ್ವದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.!

0
Spread the love

ಇಂದು ವಿಶ್ವ ಜಲ ದಿನ. ಸಕಲ ಜೀವರಾಶಿಗಳ ಮೂಲ ನೀರು. ನೀರಿಲ್ಲದ ಬದುಕು ಊಹೆಗೂ ನಿಲುಕದ್ದು, ಹುಟ್ಟಿನಿಂದ ಸಾಯುವವರೆಗೂ ಪ್ರತೀ ಜೀವಿಗೆ ನೀರು ಅತ್ಯಗತ್ಯ. ಸಾಯುವ ಮೊದಲೂ ಕೂಡ ಒಂದು ಹನಿ ನೀರು ಬಾಯಿಗೆ ಬೇಕು ಎನ್ನುವ ಪದ್ಧತಿ ಇದೆ. ಹೀಗಾಗಿ ನೀರನ್ನು ಜೀವಜಲ ಎಂದೇ ಕರೆಯುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಡಿನ ನಾಶದಿಂದ ಸರಿಯಾಗಿ ಮಳೆಯಾಗದೆ ನೀರಿನ ಕೊರತೆ ಎದುರಾಗುತ್ತಿದೆ.

Advertisement

ನೀರಿನ ಬಳಕೆ ,ಉಳಿಕೆ ಮತ್ತು ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಮಾರ್ಚ್‌ 22ರಂದು ವಿಶ್ವ ಜಲ ದಿನವನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಆಚರಿಸಲಾಗುತ್ತದೆ. 1993ರಲ್ಲಿ ಬ್ರೆಜಿಲ್‌ನ ರಿಯೋದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮಾವೇಶದಲ್ಲಿ ಜಲ ಸಂರಕ್ಷಣೆಯ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು ಹಾಗೂ ಪ್ರತಿ ವರ್ಷ ಮಾರ್ಚ್‌ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.

ಪ್ರತಿವರ್ಷ ಒಂದು ಧ್ಯೇಯವಾಕ್ಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ ‘ನೇಚರ್‌ ಫಾರ್‌ ವಾಟರ್‌’. 21 ನೇ ಶತಮಾನದಲ್ಲಿ ನಾವು ಎದುರಿಸುತ್ತಿರುವ ನೀರಿನ ಸವಾಲುಗಳಿಗೆ ಪ್ರಕೃತಿ ಆಧಾರಿತ ಪರಿಹಾರಗಳನ್ನು ಅನ್ವೇಷಿಸುವುದಾಗಿದೆ. ಹಾನಿಗೊಳಗಾದ ಪರಿಸರ ವ್ಯವಸ್ಥೆಯು ಮಾನವ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.

ಪ್ರಕೃತಿಯನ್ನು ಉಳಿಸಿ ನೀರನ್ನು ಸಂರಕ್ಷಿಸಬೇಕಾಗಿದೆ. ಏಕೆಂದರೆ ವಿಶ್ವದ ಸಕಲ ಜೀವರಾಶಿಗಳಿಗೆ ನೀರು ಜೀವನಾಧಾರ. ಜಲವೇ ಸಂಜೀವಿನಿ. ನಮ್ಮ ಭಾರತದಲ್ಲಿ ನೀರಿಗೆ ದೈವೀ ಸ್ಥಾನವನ್ನು ನೀಡಲಾಗಿದೆ. ಸಂಶೋಧನೆ ಪ್ರಕಾರ ಭೂಮಿ ಮಾತ್ರ ಮಾನವ ಯೋಗ್ಯ ತಾಣ ಮತ್ತು ಶುದ್ಧ ಸಿಹಿ ನೀರು ಸಿಗುವ ಏಕೈಕ ಗ್ರಹ. ಭೂಮಿಯಲ್ಲಿ ಉಪಯೋಗಿಸಬಹುದಾದ ಸಿಹಿ ನೀರಿನ ಅಂಶ ಬಹಳ ಕಡಿಮೆ ಇದೆ. ಇಂದು, 2.1 ಶತಕೋಟಿ ಜನರ ಮನೆಯಲ್ಲಿ ಕುಡಿಯುವ ನೀರು ಇಲ್ಲದೆ ಬದುಕುತ್ತಿದ್ದಾರೆ. ಇದು ಅವರ ಆರೋಗ್ಯ, ಶಿಕ್ಷ ಣ ಮತ್ತು ಜೀವನೋಪಾಯದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ.

ಬೆಳೆಯುತ್ತಿರುವ ಜನಸಂಖ್ಯೆ, ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ, ಕೈಗಾರಿಕರಣ, ಅರಣ್ಯನಾಶ ಇನ್ನಿತರ ಕಾರಣಗಳಿಂದ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಬೇಸಿಗೆ ಶುರುವಾಗುವ ಮುಂಚೆಯೇ ನೀರಿನ ಕೊರತೆ ಕಂಡುಬರುತ್ತಿದೆ. ನಮ್ಮ ಭಾರತದಲ್ಲಿ ಎಷ್ಟೋ ಗ್ರಾಮಗಳಲ್ಲಿ ಇಂದಿಗೂ ನೀರಿನ ಕೊರತೆಯ ತೀವ್ರ ಸಮಸ್ಯೆ ಇದೆ. ನೀರನ್ನು ಅನವಶ್ಯಕವಾಗಿ ಪೋಲುಮಾಡದೆ ಹನಿ ಹನಿ ನೀರನ್ನು ಸಂರಕ್ಷಿಸುವುದು, ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.


Spread the love

LEAVE A REPLY

Please enter your comment!
Please enter your name here