ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಶುಕ್ರವಾರ) ಉಡುಪಿ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ನಗರವು ಖಾಕಿ ಸರ್ಪಗಾವಲು ಹಾಕಿದೆ. ಪ್ರಧಾನಿಯವರ ಸ್ವಾಗತಕ್ಕೆ ನಗರ ಸಿದ್ಧವಾಗಿದೆ.
ಬನ್ನಂಜೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಕಲ್ಸಂಕದವರೆಗೆ ರೋಡ್ ಶೋ ನಡೆಯಲಿದೆ. ಈ ರಸ್ತೆಯ ಎರಡು ಕಡೆಗಳಲ್ಲಿ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ, ರಸ್ತೆಯ ಬದಿಯ ಅಂಗಡಿ ಮಾಲೀಕರಿಗೆ ಆ ದಿನ ಅಂಗಡಿಗಳನ್ನು ತೆರೆಯಬಾರದು ಎಂಬ ಸೂಚನೆ ಜಿಲ್ಲಾಡಳಿತ ನೀಡಿದೆ.
ಶಿಷ್ಟಾಚಾರ ಪರಿಪಾಲನೆ: ಪ್ರಧಾನಿಯವರ ಆಗಮನದ ಹಿನ್ನೆಲೆ, ಜಿಲ್ಲಾಡಳಿತ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ನವೆಂಬರ್ 28ರಂದು ನಗರದಲ್ಲಿ ಯಾವುದೇ ಕಾಮಗಾರಿ, ಹೊಂಡ ತೋಡುವುದು ಮಾಡಬಾರದು. ಕಾರ್ಯಕ್ರಮದ ದಿನ ಸಹ ಪರವಾನಗಿ ಇಲ್ಲದೆ ದ್ರೋಣ್ ಹಾರಿಸಲು ಅನುಮತಿ ಇಲ್ಲ ಎಂದು ಸೂಚನೆ ನೀಡಲಾಗಿದೆ.
ಲಕ್ಷಕಂಠ ಗೀತಾ ಪಾರಾಯಣ: ಬೃಹತ್ ವೇದಿಕೆಯ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಮಂಗಳವಾರ ಸಂಜೆ ಮುಖ್ಯವೇದಿಕೆಯ ಭಾಗಶಃ ನಿರ್ಮಾಣ ಮುಗಿದಿದ್ದು, ಪಾರಾಯಣಕ್ಕಾಗಿ ಮ್ಯಾಟ್ಗಳ ಅಳವಡಿಕೆ ನಡೆಯುತ್ತಿದೆ. ವೇದಿಕೆಯ ಎತ್ತರ ಮತ್ತು ಶೂನ್ಯ ವಲಯ ನಿರ್ಮಾಣ ಎಸ್ಪಿಜಿ ಸೂಚನೆಯಂತೆ ನಡೆಯುತ್ತಿದೆ.
ನಗರ ಸಿಂಗಾರ: ಪ್ರಧಾನಿಯವರ ಆಗಮನದ ಹಿನ್ನೆಲೆ, ಕೇಸರ ಬಾವುಟ ಹಾರಾಟ ಮತ್ತು ಭಾವಚಿತ್ರಗಳ ಕಟೌಟ್ಗಳು ನಗರದಲ್ಲೆಲ್ಲಾ ರಾರಾಜಿಸುತ್ತಿವೆ. ಕೆಲವೆಡೆ ಕೇಸರಿ ಬಂಟಿಂಗ್ಸ್ ಹಾಕಲಾಗಿದೆ, ಹಾಗೂ ಎಲ್ಲ ಕಡೆ ಬ್ಯಾರಿಕೇಡ್ ನಿರ್ಮಿಸಲಾಗಿದೆ.
ಶಾಲೆಗಳಿಗೆ ರಜೆ: ಉಡುಪಿ, ಮಲ್ಪೆ ಮತ್ತು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ನವೆಂಬರ್ 28ಕ್ಕೆ ರಜೆ ಘೋಷಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.



