ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಅಧುನಿಕತೆ, ತಂತ್ರಜ್ಞಾನಗಳ ಪ್ರಭಾವದ ನಡುವೆಯೂ ಸಕಲ ಜೀವರಾಶಿಗಳಿಗೆ ಅನ್ನ ನೀಡುವ ಅನ್ನದಾತರೂ ಕೃಷಿ ಚಟುವಟಿಕೆಗಳ ಬಿಡುವಿನ ಅವಧಿಯಲ್ಲಿ ಜೀವನಾಡಿ ಎತ್ತುಗಳನ್ನು ಓಡಿಸುವ, ಗಾಡಾ ಓಡಿಸುವ ಮತ್ತು ಇತರೇ ಸಾಂಪ್ರದಾಯಿಕ ಸ್ಫರ್ಧೆಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ವಕೀಲ ಶರಣಬಸವ ಅಂಗಡಿ ಹೇಳಿದರು.
ಅವರು ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ಗ್ರಾಮದೇವತೆ ದ್ಯಾಮವ್ವ ದೇವಿ ಹಾಗೂ ಶ್ರೀ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ನವಚೇತನ ಯುವಕ ಮಂಡಳದ ಆಶ್ರದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಭಾರಿ ಜೋಡೆತ್ತಿನ ಖಾಲಿ ಗಾಡಾ ಓಡಿಸುವ ಸ್ಫರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ವರ್ಷಪೂರ್ತಿ ಭೂತಾಯಿಯೊಂದಿಗೆ ದುಡಿಯುವ ರೈತರು ವಿಶೇಷವಾಗಿ ಆಚರಿಸುವ ಹಬ್ಬ, ಆಚರಣೆ, ಉತ್ಸವಗಳಿಗೆ ಸಹಾಯ-ಸಹಕಾರ ನೀಡುತ್ತೇನೆ. ಪ್ರತಿವರ್ಷವೂ ಜಾತ್ರಾ ಮಹೋತ್ಸವದ ಅಂಗವಾಗಿ ಗಾಡಾ ಓಡುಸುವ ಸ್ಫರ್ಧೆ ಆಯೋಜಿಸುವ ಮೂಲಕ ಸಂಪ್ರದಾಯ ಮುಂದುವರೆಸಿಕೊಂಡು ಹೋಗಬೇಕು. ಎತ್ತಿನ ಗಾಡಾ ಸ್ಪರ್ಧೆ ಬರೀ ಮನರಂಜನೆಗೆ ಸೀಮಿತವಾಗಿರದೇ ರೈತರ ಪರಸ್ಪರ ಬ್ರಾತೃತ್ವದ, ಭಾಂದವ್ಯ ಬೆಸುಗೆಗೂ ಕಾರಣವಾಗುತ್ತಿದೆ. ಇಂತಹ ಸ್ಫರ್ಧೆಗಳು ನಡೆದ ಸಂದರ್ಭದಲ್ಲಿ ನೂತನ ಕೃಷಿ ಪದ್ಧತಿ, ಹೊಸ ಸಂಶೋಧನೆ, ಕೃಷಿ ತಳಿ ಬೀಜಗಳು ಸೇರಿ ಕೃಷಿ ಪೂರಕ ವಿಚಾರ ವಿನಮಯಗಳು ನಡೆಯುತ್ತದೆ ಎಂದರು.
ಈ ವೇಳೆ ಪ್ರಕಾಶ ಕಳ್ಳಿಹಾಳ, ಸಂತೋಷ ಚಕ್ರಸಾಲಿ, ವೀರುಪಾಕ್ಷಪ್ಪ ಶೀರನಹಳ್ಳಿ, ಪಂಚಾಕ್ಷರಪ್ಪ ಅಂಗಡಿ, ರಾಜಶೇಖರ ಮೇಲ್ಮರಿ, ಬಸವರಾಜ ಅಂಗಡಿ, ಮಲ್ಲಪ್ಪ ಬೀರಬ್ಬಿ , ಕುಬೇರ ಲಮಾಣಿ, ಶಂಕ್ರಣ್ಣ ಗೋಡಿ, ಫಕ್ಕೀರಪ್ಪ ಬೂದಿಹಾಳ, ಈರಣ್ಣ ಗಾಣಿಗೇರ. ವಿರೇಶ ಸಾಸಲವಾಡ, ಕುಮಾರ ಬೆಟಗೇರಿ, ರಮೇಶ ಹಂಗನಕಟ್ಟಿ, ನಾಗರಾಜ ಹಾವಳಕೇರಿ, ಹಾಲಪ್ಪ ಸೂರಣಗಿ, ಜಗದೀಶ ಕುರಿ, ಹನಮಂತ ಜಾಲಿಮರದ, ಚನ್ನಬಸಯ್ಯ ದಿಡ್ಡಿಮಠ ಸೇರಿ ಹಲವರಿದ್ದರು. ಸೂರಣಗಿ ಗ್ರಾ.ಪಂ ಅಧ್ಯಕ್ಷರು, ಸರ್ವ ಸದಸ್ಯರು, ಹಿರಿಯರು, ದಾನಿಗಳು ಉಪಸ್ಥಿತರಿದ್ದು ಬಹುಮಾನ ವಿತರಿಸಿರು. ನವಚೇತನ ಯುವಕ ಮಂಡಳದ ಸರ್ವ ಸದಸ್ಯರು ನಿರ್ವಹಿಸಿದರು.
ಇಡೀ ದಿನ ನಡೆದ ಸ್ಪರ್ದೆಯಲ್ಲಿ ಅನೇಕ ಜಿಲ್ಲೆಗಳಿಂದ ನೂರಾರು ಎತ್ತುಗಳು ಭಾಗವಹಿಸಿದ್ದವು. ಸಂಜೆ ೭ ಗಂಟೆಗೆ ವಿಜೇತ ಎತ್ತುಗಳಿಗೆ ಬಹುಮಾನ ವಿತರಿಸಲಾಯಿತು. ಕಾಳಗಿನಕೊಪ್ಪದ ಶ್ರೀ ಪಿಶೆಲಿಂಗೇಶ್ವರ ಪ್ರಸನ್ನ ಗಾಡಾ (ಪ್ರಥಮ), ಅಲರವಾಡದ ಶ್ರೀ ಆಂಜನೇಯ ಪ್ರಸನ್ನ (ದ್ವಿತೀಯ), ಡಿ.ಕೆ. ಹಳ್ಳಿಯ ಶ್ರೀ ಗಡಿಯಮ್ಮದೇವಿ ಪ್ರಸನ್ನ (ತೃತೀಯ) ಬಹುಮಾನ ಪಡೆದುಕೊಂಡವು. ಒಟ್ಟು ೩೧ ಬಹುಮಾನಗಳನ್ನು ಹಾಗೂ ಒಂದು ಬಂಪರ್ ಬಹುಮಾನವನ್ನು ನೀಡಲಾಯಿತು.