ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಎಸ್ಎಸ್ಕೆ ಸಮಾಜದವರು ಪ್ರತಿವರ್ಷವೂ ಶೃದ್ಧೆ, ಭಕ್ತಿ, ಸಂಪ್ರದಾಯಬದ್ಧವಾಗಿ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಿದ್ದು, ಶುಕ್ರವಾರ 7ನೇ ದಿನ ವಿಸರ್ಜನೆಯ ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳೊಡಗೂಡಿದ ಸಮಾಜ ಬಾಂಧವರು, ಭಾವಸಾರ ಕ್ಷತ್ರಿಯ ಸಮಾಜದವರೊಂದಿಗೆ ಭಜನೆ, ಪ್ರಾರ್ಥನೆ, ಸಾಮೂಹಿಕ ನೃತ್ಯದೊಂದಿಗೆ ಮಾದರಿಯಾಗಿ ಗಣಪತಿ ವಿಸರ್ಜನೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ವಿಸರ್ಜನೆಯ ಮೆರವಣಿಗೆಗೆ ಚಾಲನೆ ನೀಡಿದ ಪಿಎಸ್ಐ ಈರಪ್ಪ ರಿತ್ತಿ ಮಾತನಾಡಿ, ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಎಸ್ಎಸ್ಕೆ ಸಮಾಜ ಬಾಂಧವರು ಆಧುನಿಕತೆಯ ಅಬ್ಬರದಲ್ಲಿಯೂ ಸಂಪ್ರದಾಯವನ್ನು ಉಳಿಸಿಕೊಳ್ಳಬಹುದು ಎನ್ನುವದಕ್ಕೆ ಸಾಕ್ಷಿಯಾಗಿದ್ದಾರೆ. ನಮ್ಮ ಸಂಸ್ಕೃತಿಯ ಪ್ರತೀಕವಾದ ಹಬ್ಬದ ಆಚರಣೆಗಳು ಅರ್ಥಪೂರ್ಣವಾಗಿರಬೇಕು. ಬದಲಾಗಿ ಆಚರಣೆಗಳು ಯಾರಿಗೂ ತೊಂದರೆ ಆಗಬಾರದು. ಬದಲಾಗಿ ಎಲ್ಲರಿಗೂ ಖುಷಿ ತರುವಂತಿರಬೇಕು ಎಂದು ಹೇಳಿದರು.
ಎಸ್ಎಸ್ಕೆ ಸಮಾಜದ ಉಪಾಧ್ಯಕ್ಷ ನಾರಾಯಣಸಾ ಪವಾರ ಮಾತನಾಡಿ, ಸಮಾಜದಲ್ಲಿ ಎಲ್ಲ ಯುವಕರು, ಮಹಿಳೆಯರು ಹಾಗೂ ಹಿರಿಯರ ಮಾರ್ಗದರ್ಶನದಿಂದ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದು, ಗಣೇಶೋತ್ಸವವನ್ನು ಸಂಪ್ರದಾಯಬದ್ಧವಾಗಿಯೇ ಆಚರಿಸಿ ಭಜನೆಯ ಮೂಲಕವೇ ಗಣೇಶನ ವಿಸರ್ಜನೆಗೆ ನಿರ್ಧರಿಸಿದ್ದಾರೆ. ಅದರಂತೆ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡಿದ್ದು, ಭಾವಸಾರ ಕ್ಷತ್ರಿಯ ಸಮಾಜ, ಗೋಂದಳಿ ಸಮಾಜದವರ ಸಹಯೋಗದಲ್ಲಿ ಯಶಸ್ವಿಯಾಗಿ ಜರುಗುತ್ತಿದೆ ಎಂದರು.
ಮೆರವಣಿಗೆಯಲ್ಲಿ ರಂಗನಾಥ ಬದಿ, ಹಭಪ ನಾರಾಯಣ ಬಿಸೆ, ಯಲ್ಲೂಸಾ ಬದಿ, ಪಾಂಡುಸಾ ಬದಿ, ವಿ.ಎಸ್. ಸಿದ್ಲಿಂಗ್, ಭರತ ಬಾಕಳೆ, ಪರಶುರಾಮ ಮೆಹರವಾಡೆ, ಮನೋಹರಸಾ ಬಸವಾ, ರವಿ ಬದಿ, ಕಿರಣ ನವಲೆ, ವೆಂಕಟೇಶ ಮಾತಾಡೆ, ಮಹಿಳಾ ಮಂಡಳದ ಅಧ್ಯಕ್ಷೆ ಶಾಂತಾಬಾಯಿ ಪವಾರ, ಸರೋಜಬಾಯಿ ಬದಿ, ವಾಸು ಬೋಮಲೆ, ಪ್ರಭು ಬೋಮಲೆ, ಅರುಣ ನವಲೆ ಹಾಗೂ ಅಂಬಾಭವಾನಿ ಮಹಿಳಾ ಮಂಡಳ, ತರುಣ ಸಂಘದ ಸದಸ್ಯರು, ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಗದಗ ಸುಡಗಾಡ ಸಿದ್ದರ ನಗರದ ಸುಮಾರು 50 ಚಿಕ್ಕ ಮಕ್ಕಳ ತಂಡ ವಾರಕರಿ ಸಂಪ್ರದಾಯ ಪ್ರಕಾರ ತಾಳ ಮೃದಂಗ ಮೂಲಕ ಭಜನೆ ಮಾಡುತ್ತಾ ಮೆರವಣಿಗೆಯ ಆಕರ್ಷಣೆ ಹೆಚ್ಚಿಸಿದರು. ಮೆರವಣಿಗೆಯುದ್ದಕ್ಕೂ ವಿಷ್ಣು-ಹರಿನಾಮ ನಾಮಸ್ಮರಣೆ, ಗಣನಾಯಕನ ಜಯಘೋಷಗಳು ಹೊರತು ಪಡಿಸಿ ಯಾವುದೇ ಘೋಷಣೆಗಳು ಮೊಳಗಲಿಲ್ಲ. ದಾರಿಯುದ್ದಕ್ಕೂ ನೂರಾರು ಜನರು ಸೇರಿ ಮಕ್ಕಳ ಭಜನೆ ಮತ್ತು ತಾಳವಾಧ್ಯಕ್ಕೆ ನಿಂತಲ್ಲೆ ಹೆಜ್ಜೆ ಹಾಕುವಂತಾಗಿತ್ತು. ಮೆರವಣಿಗೆಯು ಶ್ರೀ ಅಂಭಾಭವಾನಿ ದೇವಸ್ಥಾನದಿಂದ ಪ್ರಾರಂಭವಾಗಿ ಶಿಗ್ಲಿ ನಾಕಾದವರೆಗೂ ಸಾಗಿ ನಂತರ ಭಕ್ತಿಪೂರ್ವಕವಾಗಿ ಗಣಪತಿಯನ್ನು ವಿಸರ್ಜಿಸಿದರು.