ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಬೂದಿಹಾಳ ಗ್ರಾಮಸ್ಥರು ಶ್ರೀಶೈಲ ಕ್ಷೇತ್ರಕ್ಕೆ ಸತತ 23ನೇ ವರ್ಷದ ಪಾದಯಾತ್ರೆಯನ್ನು ಶುಕ್ರವಾರ ಪ್ರಾರಂಭಿಸಿದರು. ಯುಗಾದಿಯಂದು ಜರಗುವ ಮಲ್ಲಿಕಾರ್ಜುನ ಜಾತ್ರೆಯಲ್ಲಿ ಪಾಲ್ಗೊಳ್ಳಲು ನೂರಾರು ಸಂಖ್ಯೆಯ ಶಿವಭಕ್ತರು ಶ್ರೀ ಕಲ್ಮೇಶ್ವರ ಭಕ್ತಮಂಡಳಿಯೊಂದಿಗೆ 12 ದಿನಗಳ ಪಾದಯಾತ್ರೆ ಕೈಗೊಂಡರು.
ಬೂದಿಹಾಳ, ಮಾಳವಾಡ, ಕುರಹಟ್ಟಿ, ತುಪ್ಪದ ಕುರಹಟ್ಟಿ, ತೊಂಡಿಹಾಳ, ಅಬ್ಬಿಗೇರಿ, ಹಾಲಕೆರೆ, ನೀರಲಗಿ ಗ್ರಾಮ ಸೇರಿದಂತೆ ಸುತ್ತುಮುತ್ತಲಿನ ಊರುಗಳಿಂದ 100ಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ಬಸವನಗೌಡ ಪಾಟೀಲ, ಸತತ 23 ವರ್ಷಗಳಿಂದ ಗ್ರಾಮದ ಕಲ್ಲಯ್ಯಜ್ಜ ಹಿರೇಮಠರ ನೇತೃತ್ವದಲ್ಲಿ ನಾವು ಶ್ರೀಶೈಲ ಮಲ್ಲಯ್ಯನ ಪಾದಯಾತ್ರೆ ಮಾಡುತ್ತಾ ಬಂದಿದ್ದೇವೆ ಎಂದರು.
ಪಾದಯಾತ್ರಿಕ ಕಲ್ಲಯ್ಯಜ್ಜ ಹಿರೇವ್ಮಠ ಮಾತನಾಡಿ, ಪ್ರತಿದಿನ 40ರಿಂದ 50 ಕಿ.ಮೀ.ನಂತೆ 500ಕ್ಕೂ ಹೆಚ್ಚು ಕಿ.ಮೀ. ನಡೆದು ಶ್ರೀಶೈಲ ತಲುಪಿ ದೇವರ ದರ್ಶನ ಪಡೆಯುತ್ತೇವೆ. ಕರ್ನೂಲು ದಾಟುತ್ತಿದ್ದಂತೆ ಬೆಟ್ಟ ಗುಡ್ಡಗಳ ನಡುವೆ ನಡಿಗೆ ಕಠಿಣವಾಗುತ್ತದೆ. ಇಂಥ ದುರ್ಗಮ ದಾರಿ ತುಳಿದು ಮಲ್ಲಯ್ಯನ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಂತೆ ನಡೆದು ಬಂದ ಆಯಾಸವೆಲ್ಲ ಮರೆತು ಹೋಗುತ್ತದೆ. ಮಲ್ಲಯ್ಯನ ಸೇವೆ, ನಮ್ಮ ನಂಬಿಕೆಯಿಂದ 23 ವರ್ಷಗಳಿಂದ ಯಾತ್ರೆ ನಡೆಯುತ್ತಿದೆ. ನಮಗೆ ಯಾವ ತೊಂದರೆಯಾಗಿಲ್ಲ. ಈ ಯಾತ್ರೆ ನಮ್ಮ ಭಕ್ತಿ ಸಮರ್ಪಣೆಗೊಂದು ಅವಕಾಶ ಕಲ್ಪಿಸುತ್ತದೆ ಎಂದರು.
ಪಾದಯಾತ್ರೆಯು ಬೂದಿಹಾಳ, ನಿಡಗುಂದಿ, ಗಜೇಂದ್ರಗಡ, ಕುಷ್ಟಗಿ, ಛತ್ರ, ದೇಸಾಯಿ ಭೋಗಾಪುರ, ಪೋತ್ನಾಳ ಕ್ರಾಸ್, ಕರ್ನಾಟಕದ ಕೊನೆಯ ಹಳ್ಳಿ ಜಾಹಗೀರಪನ್ನೂರ, ಆಂಧ್ರದ ಕರೆಹೊಳ್ಳಿ, ಕರ್ನೂಲ್, ಆತ್ಮಕೂರ, ವೆಂಕಟಾಪೂರ ಮಾರ್ಗವಾಗಿ ಮಾ.26ರಂದು ಶ್ರೀಶೈಲಂ ಕ್ಷೇತ್ರವನ್ನು ತಲುಪಲಿದೆ.