ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ ಸಿನಿಮಾ ತಂಡಕ್ಕೆ ಸಂಕಷ್ಟದ ಮೇಲೆ ಸಂಕಷ್ಟ ಶುರುವಾಗಿದೆ. 2022 ರಲ್ಲಿ ರಿಲೀಸ್ ಆದ ಕಾಂತಾರ ಚಿತ್ರ ದೇಶ-ವಿದೇಶದಲ್ಲಿ ಭಾರೀ ಸದ್ದು ಮಾಡಿತ್ತು. ಇಡೀ ವಿಶ್ವವನ್ನೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಇದು. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದಿರುವ ಸಿನಿಮಾ ಇದಾಗಿದ್ದು, ಇದೀಗ ಕಾಂತಾರ ಅಧ್ಯಾಯ -1 ಎಂದು ಪಾರ್ಟ್ 2 ಸಿನಿಮಾ ಮಾಡಲು ಮುಂದಾಗಿದ್ದಾರೆ. ಆದ್ರೆ ಈ ಸಿನಿಮಾ ತಂಡಕ್ಕೆ ಆರಂಭದಿಂದಲೂ ಒಂದರ ಮೇಲೆ ಒಂದಕ್ಕೆ ಕಂಟಕ ಎದುರಾಗುತ್ತಿದೆ.
ಸಿನಿಮಾದ ಮೂವರು ಸಹ ಕಲಾವಿದರ ಸಾವು ಮಾಸುವ ಮುನ್ನವೇ ಮತ್ತೊಂದು ಆಘಾತ ಚಿತ್ರತಂಡಕ್ಕೆ ಎದುರಾಗಿದೆ. ಕೂದಲೆಳೆ ಅಂತರದಲ್ಲೇ ಭಾರೀ ಅನಾಹುತವೊಂದು ತಪ್ಪಿದ್ದು, ಮೂವತ್ತು ಜನರು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಜೂನ್ 14 ರಂದು ತೀರ್ಥಹಳ್ಳಿಯ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ದೋಣಿ ಮಗುಚಿದ ಘಟನೆ ಸಂಭವಿಸಿದೆ ಎಂದು ವರದಿ ಆಗಿತ್ತು.
ಮಾಣಿ ಜಲಾಶಯದಲ್ಲಿ ಶೂಟಿಂಗ್ ಮಾಡಲು ವಿವಿಧ ಇಲಾಖೆಗಳಿಂದ ಅನುಮತಿ ಪಡೆದಿರುವ ಬಗ್ಗೆ ತಾಲೂಕು ಆಡಳಿತಕ್ಕಾಗಲಿ, ಜಿಲ್ಲಾ ಆಡಳಿತಕ್ಕಾಗಲಿ ಯಾವುದೇ ಮಾಹಿತಿಯನ್ನ ಚಿತ್ರತಂಡ ನೀಡಿರುವುದಿಲ್ಲ. ಶೂಟಿಂಗ್ ವೇಳೆ ಮಾಣಿ ಜಲಾಶಯದಲ್ಲಿ ದೋಣಿ ಮಗುಚಿ 30 ಜನ ಈಜಿ ದಡ ಸೇರಿರುವ ಬಗ್ಗೆ ಸ್ಪಷ್ಟನೆ ಮಾತ್ರ ನೀಡಿದ್ದೀರಿ. ಈ ಬಗ್ಗೆ ಮಾನ್ಯ ಜಿಲ್ಲಾ ಅಧಿಕಾರಿಯವರು ಈ ಬಗ್ಗೆ ವರದಿ ಕೇಳಿದ್ದು, ರಾಜಸ್ವ ನಿರೀಕ್ಷಕರು, ನಗರ ಹೋಬಳಿರವರು ನಿಮ್ಮ ಸಂಸ್ಥೆಯ ಮ್ಯಾನೇಜರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅನುಮತಿ ಪತ್ರಗಳನ್ನ ಹಾಜರುಪಡಿಸುವಂತೆ ಹೇಳಿದ್ದರೂ ಯಾವುದೇ ಸ್ಪಂದನೆ ಸಿಕ್ಕಿರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಾಣಿ ಜಲಾಶಯದಲ್ಲಿ ನಡೆದ ಘಟನೆಯ ಬಗ್ಗೆ ಸಂಪೂರ್ಣ ವರದಿಯನ್ನು ನೀಡುವಂತೆ ಹೊಸನಗರ ತಹಶೀಲ್ದಾರ್ ಕಚೇರಿಯಿಂದ ಪತ್ರ ಬರೆದಿದ್ದು, ಪತ್ರ ತಲುಪಿದ ಮೂರುದಿನಗಳ ಒಳಗಾಗಿ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.