ಕೊಪ್ಪಳ:- ಕೊಪ್ಪಳದಲ್ಲಿ ಅನಧಿಕೃತ ರೆಸಾರ್ಟ್ಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದು, ರಾಜ್ಯ ಸರ್ಕಾರಕ್ಕೆ ಕೋಟಿ-ಕೋಟಿ ಲಾಸ್ ಆಗುತ್ತಿದೆ.
ಜಿಲ್ಲೆಯಲ್ಲಿ ಬಹುತೇಕ ರೆಸಾರ್ಟ್ಗಳು ಅನಧಿಕೃತವಾಗಿ ನಡೆಯುತ್ತಿದ್ದು, ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಮಾಡುತ್ತಿವೆ. ಬಿದಿರಿನಿಂದ ಮಾಡಿರೋ ಹಟ್ ಗಳು, ಇನ್ನೊಂದಡೆ ಪ್ರವಾಸಿಗರನ್ನು ವಿಭಿನ್ನ ಬಗೆಯ ರೆಸ್ಟೋರೆಂಟ್ ಗಳು ಆಕರ್ಷಿಸುತ್ತಿವೆ. ಇಲ್ಲಿ ಟೆಂಟ್ ಹೌಸ್ ಸೇರಿದಂತೆ ಆನಂದದಾಯಕವಾಗಿ ಕಾಲ ಕಳೆಯಲು ಎಸಿ ಕೊಠಡಿಗಳು ಕೂಡ ಸಿಗುತ್ತವೆ. ಪ್ರಕೃತಿಯ ನಡುವೆ ನಿರ್ಮಾಣವಾಗಿರೋ ಈ ರೆಸಾರ್ಟ್ ಗಳು ಇರೋದು ಕೊಪ್ಪಳ ಜಿಲ್ಲೆಯಲ್ಲಿ.
ತಾಲೂಕಿನ ಬಸ್ಸಾಪುರ, ಗಂಗಾವತಿ ತಾಲೂಕಿನ ಸಾಣಾಪುರ ಸೇರಿದಂತೆ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಇದೀಗ ರೆಸಾರ್ಟ್ಗಳ ಹಾವಳಿ ಹೆಚ್ಚಾಗಿದೆ. ಒಂದಕ್ಕಿಂತ ಒಂದು ಭಿನ್ನ ರೆಸಾರ್ಟ್ಗಳು ಆರಂಭವಾಗಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಈ ಭಾಗದಲ್ಲಿ ಇದೀಗ ಅರವತ್ತಕ್ಕೂ ಹೆಚ್ಚು ರೆಸಾರ್ಟ್ ಗಳು ತಲೆ ಎತ್ತಿವೆ. ದೇಶ ವಿದೇಶಗಳಿಂದ ಕೂಡಾ ಪ್ರವಾಸಿಗರು ಇಲ್ಲಿಗೆ ಬರ್ತಾರೆ. ಸಮೀಪದಲ್ಲಿರುವ ಹಂಪೆ, ಆಂಜನಾದ್ರಿ, ಆನೆಗೊಂದಿಗೆ ಬರೋ ಪ್ರವಾಸಿಗರು, ರಾತ್ರಿ ಸಮಯವನ್ನು ಆನಂದದಾಯಕವಾಗಿ ಕಳೆಯಲು ರೆಸಾರ್ಟ್ ಗಳಿಗೆ ಬರ್ತಾರೆ.
ಈ ಹಿಂದೆ ಜಿಲ್ಲೆಯ ವಿರುಪಾಪುರ ಗಡ್ಡಿಯನ್ನು ಮಿನಿ ಗೋವಾ ಅಂತಲೆ ಕರೆಯಲಾಗುತ್ತಿತ್ತು. ಆದರೆ ಹಂಪಿ ಅಭಿವೃದ್ದಿ ಪ್ರಾಧಿಕಾರದಲ್ಲಿದ್ದಿದ್ದರಿಂದ ಅಲ್ಲಿನ ರೆಸಾರ್ಟ್ ಗಳನ್ನು ತೆರವುಗೊಳಿಸಲಾಗಿತ್ತು. ಇದೀಗ ಹಂಪಿ ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯ ಹೊರಗೆ ರೆಸಾರ್ಟ್ ಗಳು ತಲೆ ಎತ್ತಿವೆ. ಕೃಷಿ ಭೂಮಿಯನ್ನು ಗುತ್ತಿಗೆ, ಖರೀದಿ ಪಡೆಯುತ್ತಿರುವ ಅನೇಕರು, ರೆಸಾರ್ಟ್ ಗಳನ್ನು ಆರಂಭಿಸುತ್ತಿದ್ದಾರೆ. ಆದರೆ ಬಹುತೇಕ ರೆಸಾರ್ಟ್ ಗಳು ಅನಧಿಕೃತವಾಗಿ ತಲೆ ಎತ್ತುತ್ತಿವೆ. ಇದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ.