ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದ ಟಕ್ಕೇದ ದರ್ಗಾದ ಹಜರತ್ ಸೈಯದ್ ಮಾಸೂಮ್ ಅಲಿಶಾ ಪೀರಾಂ ಹಾಗೂ ಹಜರತ್ ನಿಶಾರ ಅಲಿಷ್ಯಾ ಪೀರಾಂ ಅವರ ದರ್ಗಾದ ಉರುಸು ಮೇ 23ರ ಸಂಜೆ ಕೆಳಗಲ ಪೇಟೆಯ ದುರ್ಗಾದೇವಿಯ ಉಚ್ಚಾಯ ಎಳೆದ ಬಳಿಕ ದರ್ಗಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಭವ್ಯ ಇತಿಹಾಸ ಹೊಂದಿರುವ ಇಲ್ಲಿನ ಟಕ್ಕೇದ ದರ್ಗಾವು ಕಳೆದ ಕೆಲ ಶತಮಾನಗಳಿಂದ ಹಿಂದೂ-ಮುಸ್ಲಿಂ ಬಾಂಧವರ ಅಂತರಂಗದ ತಂತುಗಳನ್ನು ಕೂಡಿಸುವ ಕಾಯಕದಲ್ಲಿದೆ. ಮೇ.23 ಹಾಗೂ 24 ರಂದು ಜಿಯಾರತ್ ಫಾತಿಹಾಃ ಜರುಗಲಿದೆ.
ನಾಡಿನಲ್ಲಿ ಈ ಹಿಂದೆ ಶಾಂತಿ ಕದಡುವ ಯತ್ನಗಳು ನಡೆದಾಗ ಉರುಸಿನ ಸಂದರ್ಭದಲ್ಲಿ ಅನೇಕ ಮಠಾಧೀಶರು, ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ಧಾರ್ಮಿಕ ಮುಖಂಡರನ್ನು ಒಂದು ಗೂಡಿಸಿ ಸಾಮರಸ್ಯ ಕೆಡದಂತೆ ಕೋಮು ಸೌಹಾರ್ದತಾ ಮತ್ತು ಭಾವೈಕ್ಯತಾ ಸಮಾವೇಶಗಳ ಜತೆಗೆ ಪ್ರಗತಿಪರ ವಿಚಾರಧಾರೆಗಳೊಂದಿಗೆ ವಿವಿಧತೆಯಲ್ಲಿ ಏಕತೆಯ ರೂಪದಂತೆ ಪ್ರಚಾರದ ಗೋಜಿಗೆ ಅಂಟಿಕೊಳ್ಳದೇ ಸೂಫಿ ಪರಂಪರೆಯನ್ನು ಮುಂದುವರಿಸಿಕೊಂಡು, ಹಲವಾರು ರೋಗ-ರುಜಿನಗಳಿಗೆ ಆಯುರ್ವೇದ ಔಷಧಿ ನೀಡುವ ಕೀರ್ತಿ ಟಕ್ಕೇದ ಬಾಬಾನವರಿಗೆ ಸಲ್ಲುತ್ತದೆ.
ಸೂಫಿ ಸಂತ ಹಜರತ್ ಸೈಯದ್ ನಿಶಾರ ಅಲಿಷಾ ಪೀರಾಂರಿಂದ 1965ರಲ್ಲಿ ಬಯ್ಯತ್(ಗುರು ದೀಕ್ಷೆ) ಪಡೆದು ದರ್ಗಾದ 8ನೇ ಪೀಠಾಧಿಪತಿಯಾಗಿ ಹಜರತ್ ಸೈಯದ್ ಮೆಹಬೂಬ್ ಅಲಿಶಾ ಪೀರಾಂ ಅವರು ಟಕ್ಕೇದ ಬಾಬಾ, ಟಕ್ಕೇದ ಅಜ್ಜ ಹಾಗೂ ಟಕ್ಕೇದ ನಾನಾರೆಂದು ಕರೆಸಿಕೊಂಡರು. ಅನೇಕ ದಶಕಗಳಿಂದ ಜಾತಿ, ಮತ ಬೇಧ ಎಣಿಸದೆ, ಬಯಸಿ ಬಂದ ಭಕ್ತರನ್ನು ಪ್ರೀತಿಯಿಂದ ಕಂಡು ರೋಗಿಗಳಿಗೆ ಮಂತ್ರ ಶಕ್ತಿಯಿಂದ ಪರಿಹಾರ ನೀಡಿದ್ದಾರೆ. 9ನೇ ಪೀಠಾಧಿಪತಿಯಾಗಿ (2015)ಹಜರತ್ ಸೈಯದ್ ನಿಜಾಮುದ್ದೀನ್ ಶಾ ಮಕಾನದಾರ ಅವರು ಭಕ್ತರ ಪ್ರೀತಿಗೆ ಪಾತ್ರರಾಗಿದ್ದಾರೆ.
ಸೌಹಾರ್ದತೆಯ ಪ್ರತೀಕವಾಗಿರುವ ಸೈಯದ್ ಟಕ್ಕೇದ ದರ್ಗಾದ ಉರುಸು ಪ್ರತಿ ವರ್ಷ ಭೌದ್ಧ ಪೂರ್ಣಿಮೆಯ ದಿನದಂದು ಜರುಗಲಿದೆ. ಆ ದಿನದಂದೇ ಸಂಜೆ ಕೆಳಗಲ ಪೇಟೆಯ ದುರ್ಗಾದೇವಿಯ ಉಚ್ಚಾಯ ಎಳೆದ ಬಳಿಕ ಉರುಸಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅನ್ನಸಂತರ್ಪಣೆ ಆಚರಣೆಗಳಿಗೆ ಚಾಲನೆ ನೀಡುವುದು ವಿಶೇಷತೆಯಾಗಿದೆ.