ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲೆಯ ಎಲ್ಲ ರೈತ ಬಾಂಧವರು ತಾವು ಬಿತ್ತನೆ ಮಾಡಿದ ಬೆಳೆಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. ಈ ನಿಟ್ಟಿನಲ್ಲಿ ರೈತರಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಅರಿವು ಮೂಡಿಸುವ ಮೂಲಕ ಸೂಕ್ತ ಮಾರ್ಗದರ್ಶನ ಮಾಡಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶಿಖಾ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ವಿಡಿಯೋ ಸಂವಾದ ಸಭೆಯ ಮೂಲಕ ಮಾತನಾಡಿದರು.
ಮುಂಗಾರು ಬಿತ್ತನೆ ಕಾರ್ಯ ಈಗಾಗಲೇ ಆರಂಭವಾಗಿರುವುದರಿಂದ ರೈತರಲ್ಲಿ ಕೃಷಿ ಚಟುವಟಿಕೆ ಚುರುಕಿನಿಂದ ಕೂಡಿದ್ದು, ಅವರಿಗೆ ಅಗತ್ಯವಿರುವ ಬೀಜ, ಗೊಬ್ಬರ, ಕೀಟನಾಶಕಗಳ ಸಮರ್ಪಕವಾಗಿ ಪೂರೈಸಬೇಕು. ಈ ಪ್ರಕ್ರಿಯೆಯಲ್ಲಿ ನಿಷ್ಕಾಳಜಿ, ನಿಧಾನಗತಿ ಸಹಿಸಲಾಗದು. ಸಮಸ್ಯೆ ಉದ್ಭವಿಸದಂತೆ ಮುಂಜಾಗ್ರತೆಯಿಂದ ಇಲಾಖಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ತಪ್ಪಿದಲ್ಲಿ ಇಲಾಖಾಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದು ಎಚ್ಚರಿಸಿದರು.
ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಮಾತನಾಡಿ, 2023ರ ಮುಂಗಾರು ಹಂಗಾಮಿನಲ್ಲಿ 1,11,695 ರೈತರು ವಿಮಾ ಕಂತು ಪಾವತಿ ಮಾಡುವ ಮೂಲಕ ರೂ.252 ಕೋಟಿ ವಿಮಾ ಮೊತ್ತ ಪಾವತಿಯಾಗಿದ್ದು, ರಾಜ್ಯದಲ್ಲಿಯೇ ವಿಮಾ ಕಂತು ಪಾವತಿಯಲ್ಲಿ ಎರಡನೇ ಸ್ಥಾನದಲ್ಲಿದೆ. 2023ರ ಹಿಂಗಾರು ಬೆಳೆಗಳಿಗೆ 1,00,211 ರೈತರು ವಿಮಾ ಕಂತು ಪಾವತಿಸಿದ್ದಾರೆ. ಪ್ರಸಕ್ತ ಸಾಲಿನ ಬಿತ್ತನೆಗೆ ಅಗತ್ಯದ ಗೊಬ್ಬರ, ಕೀಟನಾಶಕ , ಬಿತ್ತನೆ ಬೀಜ ಸರಬರಾಜು ಸಮರ್ಪಕವಾಗಿ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು, ಸಾರ್ವಜನಿಕರಿಗೆ ಕುಡಿಯಲು ಸರಬರಾಜು ಮಾಡುವ ನೀರಿನ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು. ಕುಡಿಯಲು ಸೂಕ್ತವೆಂದೆನಿಸಿದಲ್ಲಿ ಮಾತ್ರವೇ ಸರಬರಾಜು ಮಾಡಬೇಕು. ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಜನಸಾಮಾನ್ಯರ ಆರೋಗ್ಯ ಸಂರಕ್ಷಣೆ ಮಾಡುವಂತೆ ಆರೋಗ್ಯ ಇಲಾಖೆ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸಿ.ಶಿಖಾ ಸೂಚಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟೆಮನಿ ಮಾತನಾಡಿ, ಜಿಲ್ಲೆಯಲ್ಲಿ ಶೇ 20ರಷ್ಟು ಬಿತ್ತನೆಯಾಗಿದೆ. 35 ಸಾವಿರಕ್ಕೂ ಅಧಿಕ ರೈತರು ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕಳೆದ ವಾರ ಜರುಗಿದ ಸಭೆಯಲ್ಲಿ ಸಂಸದರು ಸೂಚಿಸಿದಂತೆ ತೋಟಗಾರಿಕೆ ಜಿಲ್ಲೆಯನ್ನಾಗಿಸಲು ಡಿಪಿಆರ್ ತಯಾರಿಸುವಂತೆ ತಿಳಿಸಿದ್ದು, ಕ್ರಮ ವಹಿಸಲಾಗುತ್ತಿದೆ ಎಣದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ರವಿ ಗುಂಜೀಕರ ಮಾತನಾಡಿ, ಇಲಾಖೆ ವ್ಯಾಪ್ತಿಯಲ್ಲಿ 62 ವಸತಿ ನಿಲಯಗಳಿವೆ. ಇದರಲ್ಲಿ 38 ಸ್ವಂತ ಕಟ್ಟಡ ಹಾಗೂ 24 ನಿವೇಶನ ಹೊಂದಿವೆ. ಈ ವರ್ಷ ಎರಡು ವಸತಿ ನಿಲಯಗಳು ಮಂಜೂರಾಗಿದ್ದು, ಈ ವಾರ ಆರಂಭವಾಗಲಿವೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಅಮಿತ ಬಿದರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ ಮಾತನಾಡಿದರು. ನಂತರ ಮಾತನಾಡಿದ ಉಸ್ತುವಾರಿ ಕಾರ್ಯದರ್ಶಿಗಳು, ವಸತಿ ನಿಲಯಗಳಿಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕಡ್ಡಾಯವಾಗಿ ಭೇಟಿ ಮಾಡಿ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ಕೈಗೊಂಡು, ಅಗತ್ಯವಿದ್ದಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ವಹಿಸಲು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಿಇಓ ಭರತ್ ಎಸ್ ಮಾತನಾಡಿ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಬಳಸಿಕೊಂಡು ಶಾಶ್ವತ ತೋಟಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು. ಜಿಲ್ಲೆಯ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ಗಜೇಂದ್ರಗಡ ತಾಲೂಕಿನ ಪ್ರದೇಶಗಳು ತೋಟಗಾರಿಕೆಗೆ ಉತ್ತಮ ವಾತಾವರಣ ಹಾಗೂ ನೀರಿನ ಲಭ್ಯತೆ ಇರುವುದರಿಂದ ಸದುಪಯೋಗ ರೈತರಿಗೆ ದೊರಕಿಸಿ ಎಂದರು.
ಸಭೆಯಲ್ಲಿ ಡಿಎಚ್ಒ ಡಾ. ಎಸ್.ಎಸ್. ನೀಲಗುಂದ, ಜಿ.ಪಂ. ಮುಖ್ಯ ಯೋಜನಾಧಿಕಾರಿ ನಿರ್ಮಲಾ, ಲೆಕ್ಕಾಧಿಕಾರಿ ಪ್ರಶಾಂತ, ಡಿಡಿಪಿಐ ಎಂ.ಎ. ರಡ್ಡೇರ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಹುಲಗಣ್ಣವರ, ನಿರ್ಮಿತಿ ಕೇಂದ್ರದ ವ್ಯವಸ್ತಾಪಕ ನಿರ್ದೇಶಕ ಗಂಗಾಧರ ಶಿರೋಳ, ಪಿಆರ್ಇಡಿ ಕಾರ್ಯಪಾಲಕ ಅಭಿಯಂತರ ವಿಜಯಕುಮಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪ್ರಸಕ್ತ ವರ್ಷದಲ್ಲಿ ಈಗಾಗಲೇ ಮೊದಲ ತ್ರೈಮಾಸಿಕ ಮುಕ್ತಾಯದ ಹಂತದಲ್ಲಿದ್ದು ಇಲಾಖಾ ಮುಖ್ಯಸ್ಥರು ತಮಗೆ ನೀಡಿದ ಆರ್ಥಿಕ ಭೌತಿಕ ಗುರಿ ಸಾಧನೆಗೆ ಗಮನ ಹರಿಸಬೇಕು. ಶೀಘ್ರವೇ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ ಕಾಮಗಾರಿಗಳನ್ನು ನಿರ್ವಹಿಸಬೇಕು. ಕಾಮಗಾರಿಗಳ ಅನುಷ್ಟಾನದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಯಾವುದೇ ಕಾರಣಕ್ಕೂ ನೀಡಿದ ಅನುದಾನ ಮರಳಿ ಹೋಗದಂತೆ ಇಲಾಖಾ ಮುಖ್ಯಸ್ಥರು ನಿಗಾ ವಹಿಸಲು ಭರತ್ ಎಸ್ ಸೂಚಿಸಿದರು.
ವಿಮಾ ಮಾಡಿಸಿದ ಅರ್ಹ ರೈತಬಾಂಧವರೆಲ್ಲರೂ ಪ್ರಕೃತಿ ವಿಕೋಪ, ಅತಿವೃಷ್ಟಿ ಸಂಭವಿಸಿದಲ್ಲಿ ಆರ್ಥಿಕ ನಷ್ಟವನ್ನು ಸರಿದೂಗಿಸಲು ವಿಮಾ ಪರಿಹಾರ ಸಹಕಾರಿಯಾಗಿದೆ. ತಪ್ಪದೇ ರೈತಬಾಂಧವರು ವಿಮಾ ಮಾಡಿಸಲು ಅಧಿಸೂಚಿತ ಬೆಳೆಗಳಿಗೆ ವಿಮಾ ಕಂತು ಪಾವತಿಸಲು ಜಾಗೃತಿ ಮೂಡಿಸಲು ಕೃಷಿ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು.
– ಸಿ.ಶಿಖಾ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ.