ವಿಜಯಸಾಕ್ಷಿ ಸುದ್ದಿ, ಗದಗ:
ಗದಗ-ಬೆಟಗೇರಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವಳಿ ನಗರದ 35ನೇ ವಾರ್ಡ್ ನ ಕಳಸಾಪುರ ರಸ್ತೆಯ ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಉಷಾ ಮಹೇಶ್ ದಾಸರ ಪರವಾಗಿ ಸೋಮವಾರ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಭರ್ಜರಿ ಪ್ರಚಾರ ನಡೆಸಿದರು. ಪಾಂಡುರಂಗ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಮೂಲಕ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ನಾನು ಹಾಗೂ ಸಿ.ಸಿಪಾಟೀಲರು ಗದಗ ಜಿಲ್ಲಾ ಉಸ್ತುವಾರಿ ಸಚಿರವಾಗಿದ್ದಾಗ ಅವಳಿ ನಗರದ ಸಮಸ್ಯೆಗಳನ್ನು ಬಗೆಹರಿಸಿದ್ದೇವೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದೇವೆ. 2008-09ರಲ್ಲಿನ ಗದಗ ಜಿಲ್ಲೆಯ ಪರಿಸ್ಥಿತಿ ಹಾಗೂ ಈಗಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿ ಎಂದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುತ್ತದೆ. ಆದರೆ, ಇಲ್ಲಿನ ನಗರಸಭೆಯಲ್ಲಿ ಮಾತ್ರ ಸೋಲುತ್ತಿದ್ದೇವೆ. ಹೀಗಾಗಿ 35ನೇ ವಾರ್ಡ್ ನ ಬಿಜೆಪಿ ಅಭ್ಯರ್ಥಿಯಾಗಿರುವ ಉಷಾ ದಾಸರ ಅವರನ್ನು ಗೆಲ್ಲಿಸಿಕೊಡಬೇಕು. ಅಲ್ಲದೇ, ನಗರಸಭೆ ಚುನಾವಣೆಯಲ್ಲಿ ನೀಡುವ ಮತ 2023ರಲ್ಲಿ ಅನಿಲ್ ಮೆಣಸಿನಕಾಯಿ ಎಂಎಲ್ಎ ಆಗಲಿದ್ದಾರೆ ಎಂದು ಸಚಿವ ಶ್ರೀರಾಮುಲು ಭವಿಷ್ಯ ನುಡಿದರು.
ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ ಮಾತನಾಡಿ, ಕಾಂಗ್ರೆಸ್ ನವರಿಂದ ನಗರಸಭೆಯಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಂದ ಆಯ್ಕೆಯಾಗಿ ಹೋದ ಕಾಂಗ್ರೆಸ್ ಸದಸ್ಯರು ಜನರ ಕೈಗೆ ಸಿಗಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬೇರೆ ವಾರ್ಡ್ ಗೆ ಹೋಗಿ ಸ್ಪರ್ಧಿಸಿದ್ದಾರೆ. ಹೀಗಾಗಿ ಅವಳಿ ನಗರದಲ್ಲಿ ಬದಲಾವಣೆ ಆಗಬೇಕಿದೆ. ಚುನಾವಣೆ ಸಂದರ್ಭದಲ್ಲಿ ಅಲೆದಾಡುವ ಪಾಟೀಲರನ್ನು ದೂರ ಇಡುವ ಮೂಲಕ ಕಾಂಗ್ರೆಸ್ಸಿಗರಿಗೆ ತಕ್ಕ ಪಾಠ ಕಲಿಸಬೇಕು. ಅಲ್ಲದೇ, ಸಚಿವರಾದ ಶ್ರೀರಾಮುಲು, ಸಿ.ಸಿ.ಪಾಟೀಲರು ಪ್ರಚಾರಕ್ಕೆ ಬಂದ ಮೇಲೆ ಕಾಂಗ್ರೆಸ್ ನವರಿಗೆ ಲೈಟ್ ಹತ್ತಿವೆ ಎಂದು ಕಿಡಿಕಾರಿದರು.
ಸಚಿವ ಶ್ರೀರಾಮುಲು ಅವರಿಗೆ ಬಿಜೆಪಿ ಅಭ್ಯರ್ಥಿ ಉಷಾ ದಾಸರ, ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ರಾಜು ಕುರುಡಗಿ, ಎಂ.ಎಸ್.ಕರಿಗೌಡ್ರ, ಸಿದ್ದು ಪಲ್ಲೇದ, ಮಹೇಶ್ ದಾಸರ, ಅಮರೇಶ್ ಬೆಟಗೇರಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.