ಮಕ್ಕಳು ಸೇರಿ ಹತ್ತಕ್ಕೂ ಹೆಚ್ಚು ಜನರು ಗಾಯ…..
ವಿಜಯಸಾಕ್ಷಿ ಸುದ್ದಿ, ನರೇಗಲ್ಲ
ಸಾರಿಗೆ ಸಂಸ್ಥೆಯ ಬಸ್ ಹಾಗೂ ಟಾಟಾಸುಮೋ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರ ಗಾಯಗೊಂಡ ಬಾಲಕನೊಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾನೆ.
ನರೇಗಲ್ಲ ಸಮೀಪದ ನಿಡಗುಂದಿಕೊಪ್ಪದ ಬಳಿ ಈ ದುರ್ಘಟನೆ ಜರುಗಿದ್ದು, ಅಪಘಾತದಲ್ಲಿ ಮೂರು ಜನ ಮಹಿಳೆಯರು, ಇಬ್ಬರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಿ ಹಾಗೂ ಅಪ್ಜಲಪೂರ ಪಟ್ಟಣದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದು, ನಾಲ್ವರು ಮಕ್ಕಳು ತೀವ್ರ ಗಾಯಗೊಂಡಿದ್ದಾರೆ. ಬಸ್ನಲ್ಲಿದ್ದ ಪ್ರಯಾಣಿಕರಿಗೂ ಸಹ ಸಣ್ಣಪುಟ್ಟ ಗಾಯಗಳು ಆಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರನ್ನು ಅಪ್ಜಲಪೂರದ ಸಚಿನ್ ಕತ್ತಿ 31, ದ್ರಾಕ್ಷಾಯಣಿ ಕತ್ತಿ-30 ಹಾಗೂ ಮಾದನ ಹಿಪ್ಪರಗಿಯ ಶಿವಕುಮಾರ್ ಕಲಶೆಟ್ಟಿ 50, ಚಂದ್ರಕಲಾ 42, ರಾಣಿ-32 ಹಾಗೂ ದಿಂಗಾಲೇಶ್ವರ ಎಂಬ ಐದು ವರ್ಷದ ಬಾಲಕ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳು ಅಲ್ಲಮಪ್ರಭು ಎಂಬ ಬಾಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರು ಶಿರಹಟ್ಟಿ ಪಟ್ಟಣದ ಫಕ್ಕೀರೇಶ್ವರ ಮಠ ಹಾಗೂ ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ದರ್ಶನಕ್ಕೆ ಬರುತ್ತಿದ್ದರು ಎನ್ನಲಾಗಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ನರೇಗಲ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರ ನೆರವಿನೊಂದಿಗೆ ಶವಗಳನ್ನು ಹೊರ ತೆಗೆದು ಶವಾಗಾರಕ್ಕೆ ರವಾನಿಸಿದರು.