ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ
ಸಾಕಾನೆಗಳಿಗೆ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಈ ಪರೀಕ್ಷೆಯನ್ನ ಇಲ್ಲಿಯ ಬಂಡೀಪುರಕ್ಕೆ ಹೊಂದಿಕೊಂಡಿರುವ ಮಧುಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ. ಅರಣ್ಯ ಇಲಾಖೆಯು ಇಲ್ಲಿ ಸಾಕಿರುವ ಆನೆಗಳಿಗೆ ಕೊರೊನಾ ಟೆಸ್ಟ್ ನಡೆಸಿದೆ.
ಮಧುಮಲೈ ಸಾಕಾನೆ ಶಿಬಿರದಲ್ಲಿ 28 ಆನೆಗಳಿದ್ದು, ಎಲ್ಲ ಆನೆಗಳನ್ನೂ ಪರೀಕ್ಷೆಗೆ ಒಳಪಡಿಸಲಾಯಿತು. ಆನೆಗಳ ಸೊಂಡಿಲಿನಿಂದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಉತ್ತರ ಪ್ರದೇಶದ ಇಜತ್ನಗರದಲ್ಲಿನ ಭಾರತೀಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ರವಾನಿಸಲಾಯಿತು.
ದೇಶದಲ್ಲಿ ಕೊರೊನಾ 2ನೇ ಅಲೆಯ ಭೀಕರತೆ ಇನ್ನೂ ಕಡಿಮೆಯಾಗಿಲ್ಲ. ಹೀಗಾಗಿ ತಮಿಳುನಾಡಿನ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಮಧುಮಲೈ ಹುಲಿ ರಕ್ಷಿತಾರಣ್ಯದ 28 ಆನೆಗಳ ಮಾದರಿ ಸಂಗ್ರಹ ಮಾಡಲಾಗಿದೆ.
ತಮಿಳುನಾಡಿನಲ್ಲಿ ಕೊರೊನಾಗೆ ಸಿಂಹ ಬಲಿಯಾಗಿತ್ತು. ಜೂ. 3 ರಿಂದ ತಮಿಳುನಾಡಿನ ವಂದಲೂರು ಝೂನಲ್ಲಿ 9 ಸಿಂಹಗಳಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಸರ್ಕಾರ ಆನೆಗಳಿಗೂ ಕೊರೊನಾ ಪರೀಕ್ಷೆಗೆ ಸೂಚನೆ ನೀಡಿತ್ತು.