ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯತಿಯಲ್ಲಿ ನಡೆದ ಅವ್ಯವಹಾರದಲ್ಲಿ ಪಾಲ್ಗೊಂಡ ಗ್ರಾಪಂ ಅಧ್ಯಕ್ಷ, ಪಿಡಿಓ ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ತಾಪಂ ಕಾರ್ಯಾಲಯದ ಮುಂದೆ ಹೂಡಿರುವ ಅಮರಣಾಂತ ಸತ್ಯಾಗ್ರಹಕ್ಕೆ ಗುರುವಾರ ತಾಲೂಕಿನ ಪ್ರವೀಣಶೆಟ್ಟಿ ಬಣದ ಕರವೇ ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ.
ಕೂಡಲೇ ನ್ಯಾಯ ದೊರಕಿಸಬೇಕು, ಇಲ್ಲದಿದ್ದರೆ ಶುಕ್ರವಾರ ತಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿ ಗ್ರೇಡ್-೨ ತಹಸೀಲ್ದಾರ್ ಜೆ. ನಟರಾಜ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ಶಿಗ್ಲಿ ಗ್ರಾಪಂ ಕಾಮಗಾರಿಗಳಲ್ಲಿ ಅವ್ಯವಹಾರವಾಗಿರುವ ಬಗ್ಗೆ ಒಂಬುಡ್ಸ್ಮನ್ ನ್ಯಾಯಾಲಯ ಗದಗ ಇವರು ಕ್ರಮಕ್ಕೆ ಆದೇಶಿಸಿದ್ದಾರೆ. ನರೇಗಾ ಸೇರಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರವಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದಾಗ್ಯೂ ಹಿರಿಯ ಅಧಿಕಾರಿಗಳು ಮೀನಾಮೇಷ ಮಾಡುತ್ತಿದ್ದಾರೆ.
ಇದನ್ನೇ ಬಂಡವಾಳವಾಗಿಸಿಕೊಂಡಿರುವ ಆಪಾದಿತರು ರಾಜಾರೋಷವಾಗಿ ಅಧಿಕಾರದ ಮದದಲ್ಲಿ ಮೆರೆಯುತ್ತಿದ್ದಾರೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಹೋರಾಟಗಾರರ ಬೇಡಿಕೆಗಳಿಗೆ ತಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ. ಹೋರಾಟಕ್ಕೆ ನೈತಿಕ ಬಲ ತುಂಬುವ ಉದ್ದೇಶದಿಂದ ಕರವೇ ಕಾರ್ಯಕರ್ತರು ಶುಕ್ರವಾರ ಅವರ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸುತ್ತೇವೆ.
ಅವರ ನ್ಯಾಯಸಮ್ಮತವಾದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡಿ ಅವರ ಹೋರಾಟಕ್ಕೆ ನಾವು ಕೂಡಾ ಜೊತೆಯಾಗಲಿದ್ದೇವೆ. ಇಂದೇ ಅಧಿಕಾರಿಗಳು ಬಂದು ಭೇಟಿ ಕೊಡದಿದ್ದಲ್ಲಿ ಶುಕ್ರವಾರ ತಾಲೂಕ ಪಂಚಾಯತಗೆ ಬೀಗ ಹಾಕಿ ಪ್ರತಿಭಟನೆ ಮಾಡುಲಾಗುವುದು ಎಂದು ಕರವೇ ಪ್ರವೀಣ ಶೆಟ್ಟಿ ಬಣದ ತಾಲೂಕ ಅಧ್ಯಕ್ಷ ಮಹೇಶ ಕಲಘಟಗಿ ಹೇಳಿದರು.
ಗ್ರೇಡ್ ೨ ತಹಸೀಲ್ದಾರ ಜೆ ನಟರಾಜ ಅವರು ಮನವಿ ಸ್ವಿಕರಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಗಾಂಜಿ, ಚಂದ್ರು ಮುಳಗುಂದ, ತೇಜಗೌಡ ಉದ್ದನಗೌಡ್ರ, ಮಂಜುನಾಥ ಬೂದಿಹಾಳ, ಮಲ್ಲು ಅಳ್ಳಳ್ಳಿ, ಆಕಾಶ ದಾನಿ,ಪ್ರಕಾಶ ಮನ್ನಂಗಿ, ಕಾರ್ಯಕರ್ತರು ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಸುರೇಶ ಸಾಧ್ವಿ ನೇತೃತ್ವದಲ್ಲಿ ಸಂತೋಷ ಮಾದನಹಳ್ಳಿ, ಪ್ರಶಾಂತ ಬಡೆಪ್ಪನವರ, ಅಮಾತೆಪ್ಪ ಹರವಿ, ಫಕ್ಕಿರೇಶ ಕುರಿ ಮುಂತಾದವರಿದ್ದರು.