ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಾರ್ವಜನಿಕರ ಆರೋಪ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿ ವಾಹನ ಸಮೇತ ೨೨ ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ. ಈ ಕುರಿತು ಆಹಾರ ಇಲಾಖೆ ಅಧಿಕಾರಿ ಜಗದೀಶ ಕುರುಬರ ಅವರು ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ವಿವರ
ಪಟ್ಟಣದ ಪ್ರಕಾಶ ಎಂ ಕಡ್ಡಿಯವರ ಎಂಬ ಆರೋಪಿತ ಬೋಲೇರೋ ವಾಹನ(ಕೆಎ-26ಬಿ-4123)ದಲ್ಲಿ ಪಡಿತರ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ೨೪೦೯೦ ರೂ ಮೌಲ್ಯದ ೧೦೯೫ ಕೆಜಿ (೨೨ ಪ್ಲಾಸ್ಟಿಕ್ ಚೀಲ) ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ತಡೆಹಿಡಿದಿದ್ದಾರೆ. ಓರ್ವ ವ್ಯಕ್ತಿ, ವಾಹನ ಸಮೇತ ಅಕ್ಕಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ?
ಲಕ್ಷ್ಮೇಶ್ವರವನ್ನೇ ಕೇಂದ್ರವಾಗಿಸಿಕೊಂಡು ತಾಲೂಕಿನಲ್ಲಿ ಹಲವಾರು ವರ್ಷದಿಂದ ದೊಡ್ಡ ಪ್ರಮಾಣದಲ್ಲಿ ಪಡಿತರ ಅಕ್ಕಿ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕಳೆದ ಕೆಲ ದಿನಗಳಿಂದ ಅಕ್ಕಿ ಮಾರಾಟ ದಂಧೆಯ ಬಗ್ಗೆ ಪದೇ ಪದೇ ಆರೋಪ, ಆಕ್ಷೇಪಣೆಗಳು ಕೇಳಿ ಬರುತ್ತಿರುವ ಹಿನ್ನೆಲೆ ಎಚ್ಚೆತ್ತ ಅಧಿಕಾರಿಗಳು ಸಣ್ಣ ಪ್ರಮಾಣದ ಅಕ್ಕಿ ದಂಧೆ ವ್ಯಾಪಾರಿಯನ್ನು ಬಲೆಗೆ ಕೆಡವಿ ಉತ್ತರನ ಪೌರುಷ ಮೆರೆದಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.