ವಿಜಯಸಾಕ್ಷಿ ಸುದ್ದಿ, ಗದಗ:
ಜಿಲ್ಲೆಯಾದ್ಯಂತ ಕೋವಿಡ್ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ. ಈ ಮಧ್ಯೆ ಮುಂಬೈನಿಂದ ಬಂದಿದ್ದ ಓರ್ವರಿಗೆ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಪಾಸಿಟಿವ್ ವರದಿ ಬರುವುದಕ್ಕೂ ಮುನ್ನವೇ ಸೋಂಕಿತ ಯುವತಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಹೌದು, ಮುಂಬೈನಿಂದ ರೈಲು ಮೂಲಕ ಗದಗ ನಗರಕ್ಕೆ ಬಂದಿದ್ದ ಕೊಪ್ಪಳ ಮೂಲದ ಓರ್ವ ಯುವತಿಗೆ ಓಮಿಕ್ರಾನ್ ಸೋಂಕು ದೃಢಪಟ್ಟಿದೆ. ಮುಂಬೈನಿಂದ ಬಂದ 15 ಜನರಲ್ಲಿ ಯುವತಿಗೆ ಓಮಿಕ್ರಾನ್ ಪತ್ತೆಯಾಗಿದೆ. ಗದಗ ರೈಲು ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆ ಮಾಡಿದಾಗ ಡಿ.30 ರಂದು ಯುವತಿಗೆ ಸೋಂಕು ದೃಢಪಟ್ಟಿದ್ದು, ಕೂಡಲೇ ಅವರನ್ನು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೊರೊನಾ ಸೋಂಕು ಪತ್ತೆಯಾದ ಯುವತಿಯ ಮಾದರಿಯನ್ನು ಓಮಿಕ್ರಾನ್ ಶಂಕೆ ಹಿನ್ನೆಲೆಯಲ್ಲಿ ಸೋಂಕು ಪರೀಕ್ಷೆಗಾಗಿ ಜನೇವರಿ ಮೊದಲ ವಾರದಲ್ಲೇ ಬೆಂಗಳೂರಿಗೆ ಕಳುಹಿಸಿ ಕೊಡಲಾಗಿತ್ತು. ಆದರೆ, ಯುವತಿಗೆ ಓಮಿಕ್ರಾನ್ ಸೋಂಕು ಇರುವುದು ಜ.19 ರಂದು ಖಚಿತಪಟ್ಟಿದ್ದು, ಓಮಿಕ್ರಾನ್ ಸೋಂಕು ದೃಢಪಡುವುದಕ್ಕಿಂತ ಮುನ್ನವೇ ಅಂದರೆ, ಜ.8 ರಂದೇ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಇದನ್ನೂ ಓದಿ ಬಿಜೆಪಿ ಮುಖಂಡ ಎಸಿಬಿ ಖೆಡ್ಡಾಗೆ ಬಿದ್ದಿದ್ದು ಹೇಗೆ?; ಡಿಎಚ್ಒ ಕಚೇರಿಯೇ ಮಾಸ್ಟರ್ ಹೆಡ್!
ಜನರಲ್ಲಿ ಆತಂಕ:
ಮುಂಬೈನಿಂದ ರೈಲು ಮೂಲಕ ಬಂದ ಯುವತಿ ಅಂಗಡಿಗಳಲ್ಲಿ ನೀರಿನ ಬಾಟಲಿ ಸೇರಿದಂತೆ ಬೇರೆ ಬೇರೆ ವಸ್ತುಗಳನ್ನು ಖರೀದಿ ಮಾಡಿದ್ದರು. ರೈಲು ನಿಲ್ದಾಣದಲ್ಲಿ ಕೊರೊನಾ ಸೋಂಕಿನ ಪರೀಕ್ಷೆ ಮಾಡಿದ ಬಳಕ ಪಾಸಿಟಿವ್ ಕಂಡು ಬಂದಿತ್ತು. ಆಗ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಯುವತಿಯ ಪತ್ತೆಗಾಗಿ ಹರಸಾಹಸ ಪಟ್ಟಿದ್ದರು. ಇನ್ನು ಜಿಲ್ಲೆಯ ಜನರಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿಲ್ಲ ಎಂಬುದು ತುಸು ಸಮಾಧಾನ ತರಿಸಿದ್ದು, ಹೊರ ರಾಜ್ಯದ ಮಹಿಳೆಗೆ ಜಿಲ್ಲೆಯಲ್ಲಿಯೇ ಓಮಿಕ್ರಾನ್ ಸೋಂಕು ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.