ವಿಜಯಸಾಕ್ಷಿ ಸುದ್ದಿ, ಗದಗ:
ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಪಿ ಸಿ ಪಾಟೀಲ್ ಅಲಿಯಾಸ್ ಅಜ್ಜುಗೌಡ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಎಎಸ್ಐ ಪುಟ್ಟಪ್ಪ ಕೌಜಲಗಿ ಸೇರಿದಂತೆ ಐವರು ಪೊಲೀಸರು, ಇಬ್ಬರು ಪತ್ರಕರ್ತರು ಸೇರಿದಂತೆ ಒಂಬತ್ತು ಜನರ ಮೇಲೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪತ್ರಕರ್ತ ಗಿರೀಶ್ ಕುಲಕರ್ಣಿ, ಗುರುರಾಜ ಬಸವರಾಜ ತಿಳ್ಳಿಹಾಳ, ವಿಠ್ಠಲ ಚಿದಾನಂದ ಹಬೀಬ, ಖಾಸಗಿ ವಾಹಿನಿಯ ವರದಿಗಾರ ಭೀಮನಗೌಡ ಪಾಟೀಲ್, ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಎಎಸ್ಐ ಪುಟ್ಟಪ್ಪ ಕೌಜಲಗಿ, ಪೇದೆ ಸಿ.ವ್ಹಿ.ನಾಯ್ಕರ, ಟ್ರಾಫಿಕ್ ಪೊಲೀಸ್ ಠಾಣೆಯ ದಾದಾಪೀರ ಮಂಜಲಾಪೂರ, ಸಿಇಎನ್ ಪೊಲೀಸ್ ಠಾಣೆಯ ಶರಣಪ್ಪ ಅಂಗಡಿ ಹಾಗೂ ಮುಂಡರಗಿ ಠಾಣೆಯ ಅಂದಪ್ಪ ಹಣಜಿ ಸೇರಿ ಒಂಬತ್ತು ಜನರ ಮೇಲೆ ಮೃತ ಪೊಲೀಸ್ ಪೇದೆಯ ತಂದೆ ಚನ್ನವೀರಗೌಡ ಶಂಕರಗೌಡ ಪಾಟೀಲ್ ದೂರು ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?:
ಅಜ್ಜುಗೌಡ ಪಾಟೀಲ್ (ಪಿ ಸಿ ಪಾಟೀಲ್) ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಈತನಿಗೆ ನಾಲ್ಕೈದು ತಿಂಗಳಿನಿಂದ ಆರೋಪಿತರಾದ ಗಿರೀಶ್ ಕುಲಕರ್ಣಿ ಮತ್ತು ಈತನೊಂದಿಗೆ ಗುರುರಾಜ ತಿಳ್ಳಿಹಾಳ, ವಿಠ್ಠಲ ಚಿದಾನಂದ ಹಬೀಬ, ಭೀಮನಗೌಡ ಪಾಟೀಲ ಇವರು ವಿನಾಕಾರಣ ತೊಂದರೆ ಕೊಡುತ್ತಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಅಲ್ಲದೆ, ಮೊಬೈಲ್ನಲ್ಲಿ ಮೆಸೇಜ್ಗಳು, ಫೋಟೋಗಳು ನಮ್ಮ ಹತ್ತಿರವಿದ್ದು ಎಸ್ಪಿ ಅವರಿಗೆ ತೋರಿಸುತ್ತೇವೆ ಎಂದು ಹೆದರಿಸುತ್ತಿದ್ದರು.

ಅದರಂತೆ ಇನ್ನುಳಿದ ಆರೋಪಿಗಳು ಸ್ಟೇಶನ್ ಮಾಹಿತಿ, ಸ್ಟೇಶನ್ನಲ್ಲಿ ದಾಖಲಾದ ಪ್ರಕರಣದಲ್ಲಿನ ವಿಷಯದ ಬಗ್ಗೆ, ವೈಯಕ್ತಿಕ ವೀಕನೆಸ್ ಬಗ್ಗೆ ಇವರಿಗೆ ತಿಳಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳು ಕಾಟ ಕೊಡುತ್ತಿದ್ದರು ಎನ್ನಲಾಗಿದೆ.
ಇದರಿಂದಾಗಿ ನಾಲ್ಕು ಪುಟಗಳಲ್ಲಿ ತನ್ನ ಸಾವಿನ ಬಗ್ಗೆ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಪವಾಡಿಗೌಡ ಅವರ ಸಾವಿಗೆ ಈ ಎಲ್ಲ ಒಂಬತ್ತು ಜನ ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.