ಅನಧಿಕೃತ ಸಾರಾಯಿ ಮಾರಾಟವನ್ನು ಅಧಿಕೃತಗೊಳಿಸಲು ಆಗ್ರಹ * ಮೂರು ಬಾರ್ಗಳಿಗೆ ಮಂಜೂರಾತಿ ನೀಡಲು ಕುರಹಟ್ಟಿ ಗ್ರಾಮಸ್ಥರ ಒತ್ತಾಯ
ವಿಜಯಸಾಕ್ಷಿ ಸುದ್ದಿ, ರೋಣ
ಗ್ರಾಮದಲ್ಲಿ ಇರುವ ಸಾರಾಯಿ ಮಾರಾಟ ಕೇಂದ್ರಗಳನ್ನು ಅಧಿಕೃತಗೊಳಿಸುವ ಮೂಲಕ ಗ್ರಾಮಕ್ಕೆ ಮೂರು ಸಾರಾಯಿ ಮಾರಾಟ ಬಾರ್ಗಳಿಗೆ ಮಂಜೂರಾತಿ ನೀಡಬೇಕು ಹಾಗೂ ಅಕ್ರಮ ಸಾರಾಯಿ ಸೇವನೆಯಿಂದ ಐದು ಜನರು ಮೃತಪಟ್ಟಿದ್ದು ಅವರ ಪತ್ನಿಯರಿಗೆ ಪ್ರತಿ ತಿಂಗಳು ಐದು ಸಾವಿರ ರೂ.ಗಳ ಮಾಶಾಸನ ನೀಡಬೇಕು ಎಂದು ತಹಸೀಲ್ದಾರ ವಾಣಿ ಉಂಕಿ ಹಾಗೂ ಅಬಕಾರಿ ನಿರೀಕ್ಷಕ ಜಗದೀಶ ಬಡಿಗೇರರವರಿಗೆ ಕುರಹಟ್ಟಿ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಶನಿವಾರ ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಈ ಮನವಿ ಸಲ್ಲಿಸಲಾಯಿತು.
ಗ್ರಾಮಸ್ಥರ ಮನವಿ ಆಲಿಸಿ ಗಲಿಬಿಲಿಗೊಂಡ ತಹಸೀಲ್ದಾರ್ ವಾಣಿ ಉಂಕಿ ಹಾಗೂ ಅಬಕಾರಿ ನಿರೀಕ್ಷಕ ಜಗದೀಶ ಬಡಿಗೇರ ಗ್ರಾಮದಲ್ಲಿ ಅಬಕಾರಿ ಇಲಾಖೆಯಿಂದ ಓರ್ವ ಸಿಬ್ಬಂದಿಯನ್ನು ನೇಮಿಸಿ ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು ಎಂದರು.
ತಹಸೀಲ್ದಾರ್ ವಾಣಿ ಉಂಕಿ ಸಹ ಈ ಗಂಭೀರ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಜೊತೆಗೆ ಸಾರಾಯಿ ಮಾರಾಟಗಾರರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಗ್ರಾಮಸ್ಥರು ಸಹಮತ ವ್ಯಕ್ತಪಡಿಸಿದರು. ತಪ್ಪಿದಲ್ಲಿ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮದಲ್ಲಿ ಪ್ರೌಢಶಾಲಾ ಮಕ್ಕಳಿಗೆ ಕಟ್ಟಡವಿಲ್ಲ. ಹತ್ತು ವರ್ಷಗಳ ಹಿಂದೆ ಕಟ್ಟಡ ನಿರ್ಮಿಸಲು ಗ್ರಾಮದಲ್ಲಿ ಎರಡು ಎಕರೆ ಜಮೀನು ನೀಡಲಾಗಿದ್ದು, ಇಲ್ಲಿಯವರೆಗೆ ಕಟ್ಟಡ ನಿರ್ಮಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಇದಕ್ಕೆ ಉತ್ತರಿಸಿದ ಬಸವರಾಜ ಅಂಗಡಿ ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ದೊರಕಿದ್ದು ವಾರದಲ್ಲಿ ಚಾಲನೆ ನೀಡಲಾಗುವುದು. ಮುಖ್ಯವಾಗಿ ಸೈಕಲ್ ವಿತರಣೆ ಹಾಗೂ 9 ಮತ್ತು 10 ನೇ ತರಗತಿಗಳ ಮಕ್ಕಳಿಗೆ ಮೊಟ್ಟೆ ವಿತರಣೆ ಕುರಿತು ಸರಕಾರ ಆದೇಶ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ರತ್ನವ್ವ ಹಕಾರಿ ಎಂಬ ಮಹಿಳೆ ಅಂಗವಿಕಲ ಪ್ರಮಾಣ ಪತ್ರ ನೀಡುವುದಾಗಿ 7 ಸಾವಿರ ರೂ.ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದರು. ತಹಸೀಲ್ದಾರ್ ವಾಣಿ ಉಂಕಿಯವರು ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಗ್ರಾಮ ವಾಸ್ತವ್ಯದಲ್ಲಿ ಒಟ್ಟು 38 ಅರ್ಜಿಗಳು ಸಲ್ಲಿಕೆಯಾದವು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಉಪಾದ್ಯಕ್ಷರು, ಸದಸ್ಯರು, ವಿವಿದ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.