ಗುತ್ತಿಗೆದಾರರ ಆರೋಪದ ಹಿಂದೆ ‘ಕೈ’ವಾಡ; ಯಾವ್ಯಾವುದೋ ಪ್ರಾಣಿ ಮೇಲೆ ಸದನಕ್ಕೆ ಬಂದ್ರೆ ಬಿಡೋಕಾಗುತ್ತಾ?: ಸಚಿವ ಪಾಟೀಲ್ ವ್ಯಂಗ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:

Advertisement

ಕಾಂಗ್ರೆಸ್ ನಾಯಕರ 40 ಪರ್ಸಂಟೇಜ್ ಆರೋಪ
ಆಧಾರ ರಹಿತವಾಗಿದ್ದು, ಗುತ್ತಿಗೆದಾರರ ಸಂಘ ತಂದಿದ್ದ ದೂರು ಯಾರೋ ಬರೆದುಕೊಟ್ಟಿದ್ದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.

ಶುಕ್ರವಾರ ನಗರದ ವಿಠ್ಠಲರೂಢ ಸಭಾಭವನದಲ್ಲಿ ನಡೆದ ಗದಗ-ಬೆಟಗೇರಿ ನಗರಸಭೆ ಅಭ್ಯರ್ಥಿಗಳ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

‘ಗುತ್ತಿಗೆದಾರರ ಅಧ್ಯಕ್ಷರು ದೂರಿನ ಕಾಪಿಯನ್ನು ನನಗೆ ಕೊಡಲಿಕ್ಕೆ ಬಂದಿದ್ದರು. ಅವರನ್ನು ಕೂರಿಸಿಕೊಂಡು ಪತ್ರ ಓದಿದೆ. ಓದಿದಾಗ ಅದರಲ್ಲಿ ಕೆಲ ಆಕ್ಷೇಪಾರ್ಹ, ಅಸಂವಿಧಾನಿಕ ಪದಗಳನ್ನು ಉಪಯೋಗಿಸಿದ್ದರು. ಹಿರಿಯರಿದ್ದು, ಇಷ್ಟು ದೊಡ್ಡ ಗುತ್ತಿಗೆದಾರರಿದ್ದು ನಿಮ್ಮ ನೋವು ನಲಿವುಗಳನ್ನು ತೊಂದರೆಗಳನ್ನು ಸರ್ಕಾರದ ಬಳಿ ಹೇಳುವ ಅಧಿಕಾರವಿದೆ. ಆದರೆ, ಪದ ಬಳಸುವಾಗ ಗೌರವಾನ್ವಿತ ಪದ ಬಳಕೆಯಾಗಬೇಕು ಅಂತಾ ಅವರ ಹಿರಿತನಕ್ಕೆ ಗೌರವ ಕೊಟ್ಟು ಹೇಳಿದ್ದೇನೆ. ಆದರೆ, ಅವರು ನೇರವಾಗಿ ‘ನನಗೇನು ಗೊತ್ತಿಲ್ಲ ಸರ್. ಯಾರೋ ಬರೆದುಕೊಂಡು ಬಂದಿದ್ದರು. ನಾನು ಸಹಿ ಮಾಡಿದ್ದೇನೆ’ ಎಂದರು. ಇದು ಅಕ್ಷರಶಃ ಸತ್ಯ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಅಸ್ಥಿತ್ವದಲ್ಲಿ ಇದೆ ಎನ್ನುವುದಕ್ಕೆ ಸಿದ್ದರಾಮಯ್ಯ ಎಲ್ಲರೂ ಸೇರಿ ಟ್ರ್ಯಾಕ್ಟರ್ನಲ್ಲಿ ಬಂದರು. ಟ್ಯಾಕ್ಟರ್ ನಲ್ಲಿ ಬಂದವರನ್ನು ಸುವರ್ಣ ಸೌಧದಲ್ಲಿ ಬಿಡಲು ಸಾಧ್ಯವೇ ಎಂಬುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಆಲೋಚಿಸಬೇಕು. ಏಕೆಂದರೆ, ಇವತ್ತೊಬ್ಬ ಟ್ರ್ಯಾಕ್ಟರ್, ನಾಳೆ ಒಬ್ಬ ಒಂಟೆ, ಕುದುರೆ, ಚಕ್ಕಡಿ ಸೇರಿ ಇನ್ನಾವುದೋ ಪ್ರಾಣಿಗಳ ಮೇಲೆ ಬರುತ್ತಾನೆ. ಹಾಗಂತ ಸುವರ್ಣಸೌಧ ಒಳಗೆ ಬಿಡುವುದಕ್ಕೆ ಆಗುತ್ತಾ? ಎಂದು ವ್ಯಂಗ್ಯವಾಡಿದರು.

ರಮೇಶ್ ಕುಮಾರ್ ಅವರ ಅತ್ಯಾಚಾರ ಹೇಳಿಕೆಗೆ ‘ಅವರು ಒಬ್ಬ ಹಿರಿಯ ಶಾಸಕರು. ವಿಧಾನಸಭಾ ಅಧ್ಯಕ್ಷರಾಗಿ ಕೆಲಸ‌ ಮಾಡಿದವರು. ಒಮ್ಮೊಮ್ಮೆ ತಮ್ಮ ಹಿಡಿತ ತಪ್ಪಿ ಮಾತನಾಡುತ್ತಾರೆ. ಅವರು ಏನು ಹೇಳಿದ್ದಾರೋ ಅದನ್ನು ನಾನು ಕೇಳಿಲ್ಲ. ಅದನ್ನು ಕೇಳಿದ ಬಳಿಕ ಅವಶ್ಯಕತೆ ಅನಿಸಿದರೆ ಉತ್ತರ ಕೊಡುತ್ತೇನೆ. ಆದರೆ, ಅವರ ಬಗ್ಗೆ ಎಲ್ಲರಿಗೂ ವೈಯಕ್ತಿಕವಾಗಿ ಗೌರವವಿದೆ. ಇಂತಹ ವಿಷಯದಲ್ಲಿ ನನ್ನ ಬಳಿ ಭಾಷಾ ಜ್ಞಾನ ಇದೆ ಅಂತಾ ಹೇಳಿ ಎಲ್ಲ ಕಡೆಗೂ ಉಪಯೋಗಿಸಬಾರದು’ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಕಳಕಪ್ಪ ಬಂಡಿ, ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಎಂ.ಎಸ್.ಕರಿಗೌಡ್ರ, ಸಂಗಮೇಶ ದುಂದೂರ, ಸೇರಿದಂತೆ ಅನೇಕರು ಇದ್ದರು.


Spread the love

LEAVE A REPLY

Please enter your comment!
Please enter your name here