ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ತಾಲೂಕಿನ ಗೊಜನೂರ ಗ್ರಾಮದಲ್ಲಿ ಎಂಸ್ಯಾಂಡ್ ಸಾಗಿಸುವ ಟಿಪ್ಪರ್ ಎತ್ತಿನ ಚಕ್ಕಡಿಗೆ ಡಿಕ್ಕಿ ಹೊಡೆದು ಎತ್ತು ಮತ್ತು ರೈತನನ್ನು ಗಾಯಗೊಳಿಸಿದ ಘಟನೆ ನಡೆದಿದೆ. ಇದರಿಂದಾಗಿ ಆಕ್ರೋಶಗೊಂಡ ಗ್ರಾಮಸ್ಥರು ಟಿಪ್ಪರ್ ಚಾಲಕನನ್ನು ತಡೆದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಷ್ಟೇ ಅಲ್ಲದೆ ಒಂದು ಗಂಟೆಗೆ ಹೆಚ್ಚು ಕಾಲ ಈ ಮಾರ್ಗವಾಗಿ ಸಂಚರಿಸುವ ಟಿಪ್ಪರ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಬೀರಪ್ಪ ಗುಡ್ಡಣ್ಣವರ ಎಂಬ ರೈತ ತಮ್ಮ ಎತ್ತಿನ ಚಕ್ಕಡಿಯಲ್ಲಿ ತಾಯಿ, ಪತ್ನಿ, ಮಗಳು ಮತ್ತು ಒಬ್ಬ ಕೂಲಿಕಾರರನ್ನು ಕರೆದುಕೊಂಡು ಹೊಲಕ್ಕೆ ಹೋಗುತ್ತಿದ್ದರು. ಈ ವೇಳೆ ಯರ್ರಾಬರ್ರಿಯಾಗಿ ಬಂದ ಟಿಪ್ಪರ್ ಚಕ್ಕಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಕ್ಕಡಿಯಲ್ಲಿದ್ದವರು ಮುಗ್ಗರಿಸಿದ್ದು ಎತ್ತು ಮತ್ತು ರೈತನಿಗೆ ಗಾಯವಾಗಿದೆ.
ಅದೃಷ್ಟವಶಾತ್ ಚಕ್ಕಡಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಪಿಎಸ್ಐ ಸ್ಥಳಕ್ಕೆ ಆಗಮಿಸಿ ರೈತರನ್ನು ಸಮಾಧಾನ ಪಡಿಸಿ ಲಾರಿ ಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ರೈತ ಮುಖಂಡರಾದ ಮಹಾಂತಗೌಡ ಪಾಟೀಲ, ಚನ್ನಪ್ಪ ಷಣ್ಮುಕಿ, ವಿರುಪಾಕ್ಷಗೌಡ ಪಾಟೀಲ, ನಿಂಗಪ್ಪ ಕಾಟಿ, ಕೇಶಪ್ಪ ಜಾಲಮ್ಮನವರ, ಬಸವರಾಜ ಜಾಲಮ್ಮನವರ, ಪ್ರಕಾಶ ಗುಡ್ಡಣ್ಣವರ ಇದ್ದರು.