ವಿಜಯಸಾಕ್ಷಿ ಸುದ್ದಿ, ಗದಗ : ಇದೇ ಮೇ 7ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳು ಮುಗ್ಧ ಜನರಿಗೆ ಮದ್ಯ ಕುಡಿಸಿ ಮತ ಪಡೆಯುವ ಪ್ರಯತ್ನ ಮಾಡಬಹುದು. ಅಂತಹ ಪ್ರಯತ್ನಗಳು ಎಲ್ಲೇ ಆಗಲಿ, ಯಾರಿಂದಲೇ ಆಗಲಿ, ಅದನ್ನು ಬಲವಾಗಿ ವಿರೋಧಿಸಿ ಮದ್ಯಮುಕ್ತ ಚುನಾವಣೆಗೆ ಎಲ್ಲರೂ ಬೆಂಬಲಿಸೋಣ ಎಂದು ಅಖಿಲ ಕನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ ಎ ಹೇಳಿದರು.
ಸ್ಥಳೀಯ ರಾಜೀವಗಾಂಧಿ ನಗರದ ಈಶ್ವರ ದೇವಸ್ಥಾನದಲ್ಲಿ ಶುಕ್ರವಾರ ಜರುಗಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಮಟ್ಟದ ಸಭೆಯಲ್ಲಿ `ಮದ್ಯಮುಕ್ತ ಚುನಾವಣೆಗೆ ಬೆಂಬಲಿಸೋಣ’ ಎಂಬ ಕರಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಜ್ಞಾವಂತ ನಾಗರಿಕರು ಮದ್ಯಪಾನದ ಅಮಿಷಕ್ಕೆ ಬಲಿಯಾಗಬಾರದು. ರಾಜಕೀಯ ಪಕ್ಷಗಳೂ ಮದ್ಯವನ್ನು ಹಂಚುವುದಿಲ್ಲ ಎನ್ನುವ ತೀರ್ಮಾನಕ್ಕೆ ಬರಬೇಕು. ಹೆಂಡದ ಆಮಿಷಕ್ಕೆ ಬಲಿಯಾಗಿ ಮತ ಚಲಾಯಿಸಿದಲ್ಲಿ ಕೇವಲ ಹೆಂಡಕ್ಕಾಗಿ ನಮ್ಮನ್ನು ನಾವು ಮಾರಿಕೊಂಡಂತಾಗುತ್ತದೆ. ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಇಂತಹ ಪ್ರಯತ್ನಗಳು ನಡೆದಲ್ಲಿ ಜಾತಿ-ಮತ, ಪಕ್ಷಭೇದ ಮರೆತು ಸಾಮೂಹಿಕವಾಗಿ ಪ್ರತಿಭಟಿಸಬೇಕು.
ಹೆಂಡದ ಆಮಿಷಕ್ಕೆ ಬಲಿಯಾಗದೆ ಸ್ವಾಭಿಮಾನವನ್ನು ಉಳಿಸಿಕೊಂಡು, ಯೋಚಿಸಿ ಮತ ಚಲಾಯಿಸಬೇಕು ಎಂದರು.
ಸಭೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಹುಣಸಿಕಟ್ಟಿ, ನಿಕಟ ಪೂರ್ವ ಅಧ್ಯಕ್ಷ ಪ್ರೊ. ಎಚ್.ಬಿ. ಅಸೂಟಿ, ಜಿ.ಪಂ ಮಾಜಿ ಸದಸ್ಯರಾದ ಶಿವಪ್ರಕಾಶ ಮಹಾಜನಶೆಟ್ಟರ, ವೇದಿಕೆಯ ಸದಸ್ಯರಾದ ಸರೋಜಾ ಘೋರ್ಪಡೆ, ಸ್ವಪ್ನಾ ರಾಯ್ಕರ, ಮಹಾಂತೇಶ ದಶಮನಿ, ಜಗದೀಶ ಕರಡಿ, ಜಯದೇವ ಭಟ್, ಗವಿಸಿದ್ದಯ್ಯ ಹಳ್ಳಿಕೇರಿಮಠ, ನಾಗೇಶ ಹುಬ್ಬಳ್ಳಿ, ಪಾಂಡುರಂಗ ಪತ್ತಾರ, ಪ್ರಕಾಶ ಮದ್ದಿನ, ಫಕೀರೇಶ ರಟ್ಟಿಹಳ್ಳಿ, ಎ.ಕೆ. ಮುಲ್ಲಾನವರ, ವೆಂಕಟೇಶ ಇಮರಾಪೂರ, ಶಿವಯೋಗಿ ಸವದತ್ತಿ, ದೇವೇಂದ್ರಪ್ಪ ಕಾಗನವರ, ತಾಲೂಕಾ ಯೋಜನಾಧಿಕಾರಿಗಳಾದ ಸುರೇಂದ್ರ ನಾಯಕ, ಮಹಾಬಲೇಶ್ವರ ಪಟಗಾರ, ಪುನೀತ್ ಓಲೆಕಾರ, ಜಗದೀಶ ಬಂಡಾರಿ, ವಿಶಾಲಾ ಮಲ್ಲಾಪುರ, ದಿನೇಶ ಶೆರಗಾರ, ಜಯಂತ ಕೆ., ನಾಗೇಶ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯ ಶಿರಹಟ್ಟಿಯ ವೈ.ಎಸ್. ಪಾಟೀಲ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಚರಣೆ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಲು ಯೋಗ್ಯ ಜನಪ್ರತಿನಿಧಿಯನ್ನು ಆರಿಸಬೇಕು. ಮದ್ಯಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಧ್ಯೇಯೋದ್ದೇಶಗಳನ್ನು ಬೆಂಬಲಿಸುವ ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾದರೂ ಅಂತವರಿಗೆ ಮತ ಚಲಾಯಿಸಬೇಕು. ಸದೃಢ, ದುಶ್ಚಟ ರಹಿತ, ಪಾರದರ್ಶಕ ಆಡಳಿತವನ್ನು ರೂಪಿಸಲು ಎಲ್ಲರೂ ಮದ್ಯಮುಕ್ತ ಚುನಾವಣೆಗೆ ಬೆಂಬಲಿಸೋಣ ಎಂದು ಯೋಗೇಶ ಎ ಹೇಳಿದರು.


