ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಶನಿವಾರ ಜಿಲ್ಲಾ, ತಾಲೂಕ ಸ್ವೀಪ್ ಸಮಿತಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಇವರುಗಳ ಸಹಯೋಗದಲ್ಲಿ ಮತದಾನ ಜಾಗೃತಿ ಜಾಥಾ ನಡೆಸಲಾಯಿತು.
2024ರ ಲೋಕಸಭಾ ಚುನಾವಣೆ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಅಲ್ಲಲ್ಲಿ ಮತದಾನದ ಮಹತ್ವ ಕುರಿತು ಮಾಹಿತಿ ನೀಡುವ ಕಾರ್ಯವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಮತದಾನ ಎನ್ನುವದು ಪವಿತ್ರ ಕಾರ್ಯವಾಗಿದ್ದು ಮತದಾನದಿಂದ ಯಾರೂ ದೂರ ಉಳಿಯದೇ ಮುಂಬರುವ ಲೋಕಸಭೆ ಚುನಾವಣೆ ಮತದಾನ ಶೇ.100ರಷ್ಟಾಗಬೇಕು. ಮತದಾನ ನಮ್ಮೆಲ್ಲರ ಹಕ್ಕು, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಅದರಲ್ಲೂ ರೈತರು ಮತದಾನದಿಂದ ವಂಚಿತರಾಗಬಾರದು ಎಂದರು.
ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಮತದಾನ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದ್ದು, ಪವಿತ್ರವಾದ ಮತದಾನದಿಂದ ಸುಭದ್ರ ಪ್ರಜಾಪ್ರಭುತ್ವ ರಾಷ್ಟç ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವ ಜತೆಗೆ ತಾವು ವಾಸಿಸುವ ಪ್ರದೇಶ, ಗ್ರಾಮ, ವೃತ್ತಿ ಕ್ಷೇತ್ರಗಳಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಏ.9ರವರೆಗೆ ಅವಕಾಶ ಕಲ್ಪಿಸಿದ್ದು, 18 ವರ್ಷ ತುಂಬಿದ ಯುವಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮತದಾನ ಜಾಗೃತಿ ಜಾಥಾ ತಾಲೂಕು ಪಂಚಾಯಿತಿ ಕಚೇರಿಯಿಂದ ಪ್ರಾರಂಭಗೊಂಡು ಬಜಾರ ರಸ್ತೆ ಮುಖಾಂತರ ತಹಸೀಲ್ದಾರ ಕಚೇರಿ ತಲುಪಿ ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಕುಸುಮಾದೇವಿ ಪಾಟೀಲ, ಸಹಾಯಕ ತೋಟಗಾರಿಕೆ ಅಧಿಕಾರಿ ಶಿವಾನಂದ ಬಾನಿ, ಆತ್ಮ ಸಿಬ್ಬಂದಿ ದೇವರಾಜ ಆಚಲ್ಕರ್, ಅಮಿತ್ ಹಾಲೇವಾಡಿಮಠ, ಸಂಜೀವಿನಿ ಟೆಕ್ನಿಷಿಯನ್ ಹರೀಶ್ ಭದ್ರಾಪೂರ, ಮಹೇಶ ನಂದೆಣ್ಣವರ, ಸಿದ್ದು ಕನವಳ್ಳಿ, ಭಾರತಿಯ ಕಿಸಾನ ಸಂಘದ ತಾಲೂಕ ಅಧ್ಯಕ್ಷ ಟಾಕಪ್ಪ ಸಾತಪುತೆ, ತಾಲೂಕಿನ ಪ್ರತಿ ಗ್ರಾ.ಪಂ ಕೃಷಿ ಸಖಿಯರು, ಹಾಗೂ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿಗಳು ಇದ್ದರು.
ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ರೈತ ಮತದಾರರಿಗೆ ಕಡ್ಡಾಯ ಮತದಾನದ ಹಕ್ಕಿನ ಕುರಿತು, ಮತದಾನ ಮಹತ್ವ ಕುರಿತು ವಿವರಿಸಿದ ಚಂದ್ರಶೇಖರ ನರಸಮ್ಮನವರ, ಇದೊಂದು ಪ್ರಜಾಪ್ರಭುತ್ವದ ಹಬ್ಬವಾಗಿದ್ದರಿಂದ ರೈತರು ಮತದಾನದ ಹಕ್ಕಿನಿಂದ ದೂರ ಉಳಿಯಬಾರದು. ಪ್ರತಿಯೊಬ್ಬ ರೈತರೂ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.