ಮಂಗಳೂರು: ಕೇಂದ್ರ ಸಚಿವ ಅಮಿತ್ ಶಾ ಅವರು ಒಂದು ಹಳ್ಳಿಯ ಸೊಸೈಟಿ ಅಧ್ಯಕ್ಷರು. ಅಹಮದಾಬಾದ್ ಜಿಲ್ಲಾ ಬ್ಯಾಂಕ್, ಗುಜರಾತ್ ಅಫೆಕ್ಸ್ ಬ್ಯಾಂಕ್ ನಿರ್ದೇಶಕರು. ಸಹಕಾರ ಇಲಾಖೆಯ ಎಲ್ಲಾ ವಿಚಾರಗಳು ಸಹ ಅಮಿತ್ ಶಾಗೆ ಗೊತ್ತಿದೆ. ಅಂಥವರು ಸಹಕಾರ ಇಲಾಖೆ ಸಚಿವರಾಗಿರುವುದು ನಮಗೆಲ್ಲರಿಗೂ ಹೆಮ್ಮೆ ಎಂದು ಅಮಿತ್ ಶಾರನ್ನು ಸಚಿವ ಕೆ.ಎನ್.ರಾಜಣ್ಣ ಹಾಡಿಹೊಗಳಿದ್ದಾರೆ.
ನಗರದಲ್ಲಿ ನಡೆದ ಸಹಕಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ಸಹಕಾರ ಸಚಿವರಾದ ಮೊದಲ ದಿನವೇ ನಾನು ಸ್ವಾಗತಿಸಿದ್ದೇನೆ. ಪಕ್ಷದ ದೃಷ್ಟಿಯಲ್ಲಿ ಯಾರು ಏನು ಬೇಕಾದರೂ ಹೇಳಿಕೊಳ್ಳಬಹುದು. ಆದರೆ ನಾನೊಬ್ಬ ಸಹಕಾರ ಇಲಾಖೆ ಸಚಿವನಾಗಿ ಸ್ವಾಗತಿಸಿದ್ದೇನೆ ಎಂದು ಹೇಳಿದ್ದಾರೆ.



