ಗದಗ/ಸವದತ್ತಿ: ವೇಗವಾಗಿ ಹೊರಟಿದ್ದ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹೆದ್ದಾರಿ ಪಕ್ಕದಲ್ಲಿ ಇರುವ ಶೌಚಾಲಯದ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ದಾರುಣ ಘಟನೆ ಶುಕ್ರವಾರ ಬೆಳಗಿನ ಜಾವ ಜರುಗಿದೆ.
ಗದಗ-ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯ ಗದಗ ಸಮೀಪದ ಕಳಸಾಪೂರ ಕ್ರಾಸ್ ಬಳಿ ಈ ಅಪಘಾತ ಜರುಗಿದೆ.
ಮೃತರನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಶಿಶಿರಕುಮಾರ್ ಸಿದ್ದಯ್ಯ ಪಾಟೀಲ್(34) ಸಿದ್ದಯ್ಯ ಪತ್ರಯ್ಯ ಪಾಟೀಲ್ (58) ಹಾಗೂ ಬಾಬು ಅಲಿಯಾಸ್ ಹೇಮಚಂದ್ರ ತಂದೆ ಬಸಪ್ಪ ತಾರಿಯಾಳ (62) ಎಂಬುವರೇ ಮೃತಪಟ್ಟ ದುರ್ಧೈವಿಗಳು.
ಇದನ್ನೂ ಓದಿ ಬಿಜೆಪಿ ಒಂದೇ ಒಂದು ಕುಟುಂಬದ ಪಕ್ಷ ಆಗಬಾರದು: ಬಸನಗೌಡ ಪಾಟೀಲ್ ಯತ್ನಾಳ್
ಅಪಘಾತದಲ್ಲಿ ಶಿಶಿರಕುಮಾರ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ತಂದೆ ಸಿದ್ದಯ್ಯ ಪತ್ರಯ್ಯ ಪಾಟೀಲ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯೆ ಅಸುನೀಗಿದರು. ಮತ್ತೊಬ್ಬ ಗಾಯಾಳು ಹೇಮಚಂದ್ರ ಅಲಿಯಾಸ್ ಬಾಬು ತಾರಿಹಾಳ ಎಂಬುವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸುವ ಮಾರ್ಗಮಧ್ಯ ಮೃತಪಟ್ಟಿದ್ದಾರೆ.
ಹೆದ್ದಾರಿ ಪಕ್ಕದ ಶೌಚಾಲಯದ ಗೋಡೆಗೆ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಕಾರ್ನಲ್ಲಿರುವ ಏರ್ಬ್ಯಾಗ ಬಿಚ್ಚಿದರೂ ಮೂವರ ಪ್ರಾಣ ಮಾತ್ರ ಉಳಿಯದೇ ಇರುವುದು ಆಘಾತಕಾರಿ ವಿಷಯವಾಗಿದೆ.
ಅಪಘಾತದ ಸುದ್ದಿ ತಿಳಿದ ಗದಗ ಎಸ್ಪಿ ಬಿ.ಎಸ್. ನೇಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಂದೆ-ಮಗನ ಸಾವಿನ ಸುದ್ದಿ ತಿಳಿದ ಸವದತ್ತಿ ಪಟ್ಟಣದಲ್ಲಿನ ಪಾಟೀಲ ಅವರ ನಿವಾಸದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲ ಮುಟ್ಟಿತ್ತು.